ಶಿವಮೊಗ್ಗ : ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಐಚ್ಛಿಕ ಪರೀಕ್ಷೆ ದಿಢೀರ್ ರದ್ದಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಕಳುಹಿಸಲಾಗಿದೆ. ಬಿ.ಎ. 6ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಪರೀಕ್ಷೆ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಇಂದು ನಿಗದಿಯಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಬದಲಾದ ಹಿನ್ನೆಲೆ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಲಕೋಟೆ ತೆರೆದಾಗ ಪ್ರಶ್ನೆ ಪತ್ರಿಕೆಯಲ್ಲಿನ ಸಮಸ್ಯೆ ಗೊತ್ತಾಗಿದೆ.
ಆತಂಕ, ಗೊಂದಲದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದ ಇವತ್ತು ಐಚ್ಛಿಕ ವಿಷಯಗಳ ಪರೀಕ್ಷೆ ನಿಗದಿಯಾಗಿತ್ತು. ಐಚ್ಛಿಕ ಕನ್ನಡ ವಿಷಯ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಲಕೋಟೆ ತೆರೆದಾಗ ಶಿರೋನಾಮ ಸರಿ ಇತ್ತು. ಆದರೆ ಪ್ರಶ್ನೆಗಳು ಬದಲಾಗಿದ್ದವು. ಇವತ್ತು ಪ್ರಶ್ನೆ ಪತ್ರಿಕೆ 14ರ ಪರೀಕ್ಷೆ ನಡೆಯಬೇಕಿತ್ತು. ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಈಗಾಗಲೇ ಪರೀಕ್ಷೆ ನಡೆದಿರುವ ಪ್ರಶ್ನೆ ಪತ್ರಿಕೆ 12ರ ಪ್ರಶ್ನೆಗಳು ಇದ್ದವು ಎಂದು ತಿಳಿದು ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಉತ್ತರ ಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ಬರೆದಿದ್ದರು.

ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದೆ ಎಂಬ ವಿಷಯ ತಿಳಿದು ಆತಂಕಗೊಂಡರು. ಇತ್ತ ಪರೀಕ್ಷೆ ರದ್ದುಪಡಿಸಬೇಕೆ, ಬೇರೆ ಪ್ರಶ್ನೆ ಪತ್ರಿಕೆ ಬರುತ್ತದೆಯೇ ಎಂಬುದು ಗೊತ್ತಾಗದೆ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಗಳು ಗೊಂದಲಕ್ಕೀಡಾಗಿದ್ದವು.
ಪರೀಕ್ಷೆ ಮುಂದೂಡಿಕೆ ಮಾಹಿತಿ ಇನ್ನೊಂದೆಡೆ ಸಮಸ್ಯೆಯ ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದೆ. ಎಲ್ಲ ಕಾಲೇಜುಗಳಿಗೆ ವಾಟ್ಸಪ್ ಮೂಲಕ ಮಾಹಿತಿ ರವಾನಿಸಲಾಗಿದೆ. ‘ತಾಂತ್ರಿಕ ಕಾರಣದಿಂದಾಗಿ ಇಂದು ನಿಗದಿಯಾಗಿದ್ದ ಐಚ್ಛಿಕ ಕನ್ನಡ ವಿಷಯದ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿಗಳಿಂದ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಹಿಂಪಡೆಯುವಂತೆ’ ತಿಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಕಾಲೇಜು ಅಧ್ಯಾಪಕರ ಮೇಲೆ ಕಠಿಣ ಕ್ರಮ : ಪ್ರೊ.ಗೋಪಿನಾಥ್
ಇಂದು ನಿಗದಿಯಾಗಿದ್ದ ಬಿ. ಎ. ಆರನೇ ಸೆಮಿಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆಯ ಗೊಂದಲದಿಂದ ಮುಂದೂಡಲಾಗಿದ್ದು, ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಕನ್ನಡ ವಿಷಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನು ಕರೆಸಿ ಪರೀಕ್ಷಾ ವಿಭಾಗದಲ್ಲಿ ವಿಚಾರಣೆ ನಡೆಸಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಪರಿಶೀಲನೆ ನಡೆಸಿದ ಅಧ್ಯಾಪಕರುಗಳು ಮತ್ತು ಅಧ್ಯಕ್ಷರು ಹೊಣೆಗಾರರಾಗಿರುತ್ತಾರೆ.
ಈ ಕುರಿತು ಪರೀಕ್ಷಾ ಮಂಡಳಿಯ ಅಧ್ಯಕ್ಷರು ತಪ್ರೊಪ್ಪಿಗೆಯ ಪತ್ರ ಸಲ್ಲಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶ್ವವಿದ್ಯಾಲಯದ ಘನತೆಗೆ ಕುಂದು ತಂದಿರುವ ಮತ್ತು ವಿದ್ಯಾರ್ಥಿಗಳಿಗೆ ತೊಡಕು ಉಂಟು ಮಾಡಿರುವ ಈ ಪ್ರಕರಣಕ್ಕೆ ಸಂಬಂಧಪಟ್ಟವರ ಮೇಲೆ ಪರೀಕ್ಷಾ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.