ಶಿಕಾರಿಪುರ: ರಂಜಾನ್ ದೇಣಿಗೆ ಸಂಘರ್ಷ: ಕಲ್ಲು ತೂರಾಟ, 10 ಜನರ ಬಂಧನ

ಶಿಕಾರಿಪುರ: ರಂಜಾನ್ ದೇಣಿಗೆ ಸಂಘರ್ಷ: ಕಲ್ಲು ತೂರಾಟ, 10 ಜನರ ಬಂಧನ
Facebook
Twitter
LinkedIn
WhatsApp

ಶಿಕಾರಿಪುರ ರಂಜಾನ್ ಹಬ್ಬಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಸಂಘರ್ಷ ಕಲ್ಲು ತೂರಾಟಕ್ಕೆ ಸಾಕ್ಷಿಯಾದ ಘಟನೆ ಪಟ್ಟಣದ ಗಗ್ರಿ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯ ಹತ್ತು ಮಂದಿಯನ್ನು ಬಂಧಿಸಿದ್ದಾರೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಭೆ ಸೇರಿದ್ದ ಮುಖಂಡರು, ಪ್ರತಿ ಕುಟುಂಬದಿಂದ ತಲಾ 1,000 ರೂಪಾಯಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದ್ದರು. ಆದರೆ, ಈ ನಿರ್ಧಾರಕ್ಕೆ ಸಭೆಯಲ್ಲಿದ್ದ ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವೇಳೆ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಗಲಾಟೆ ವಿಕೋಪಕ್ಕೆ ತಿರುಗಿ ಶಿಕಾರಿಪುರ–ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲೇ ಎರಡೂ ಗುಂಪುಗಳು ಪರಸ್ಪರ ಕಲ್ಲು ಮತ್ತು ಬಡಗಿಗಳಿಂದ ದಾಳಿ ನಡೆಸಿದವು. ರಸ್ತೆಯುದ್ದಕ್ಕೂ ಕಲ್ಲುಗಳು ಬಿದ್ದಿದ್ದರಿಂದ ವಾಹನ ಸವಾರರು ಆತಂಕಗೊಂಡರು. ಈ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

​ಪೊಲೀಸ್ ಮಧ್ಯಪ್ರವೇಶ:
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಶಿಕಾರಿಪುರ ಪಟ್ಟಣ ಠಾಣೆಯ ಪೊಲೀಸರು ಲಾಠಿ ಪ್ರಹಾರದ ಎಚ್ಚರಿಕೆ ನೀಡಿ ಗುಂಪನ್ನು ಚದುರಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಂಡು ಸಂಚಾರ ಪುನರಾರಂಭವಾಯಿತು.​”ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ 10 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ, ಪರಸ್ಪರ ಎರಡು ವಿರೋಧಿ ಬಣ್ಣಗಳ ಮದ್ಯ ದೂರು ಮತ್ತು ಪ್ರತಿ ದೂರು ದಾಖಲಾಗಿರುತ್ತದೆ. ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.