ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ನಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್ ..!

ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ನಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್ ..!

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುವ ಮೂಲಕ ಶೇ.100 ರಷ್ಟು ಮತದಾನ ಆಗುವಂತೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮನವಿ ಮಾಡಿದರು.

ಶಿವಮೊಗ್ಗ ನಗರದ
ಶಿವಪ್ಪನಾಯಕ ಮಾರುಕಟ್ಟೆಯ ಸಿಟಿ ಸೆಂಟರ್ ಮಾಲ್‍ನಲ್ಲಿ ಏ.28 ರ ಸಂಜೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಶಿವಮೊಗ್ಗ ಮತದಾನ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಮಾಲ್‍ನಲ್ಲಿ ಸ್ಥಾಪಿಸಲಾಗಿರುವ ಚುನಾವಣಾ ಮಾಡೆಲ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಮತದಾನ ಪ್ರಮಾಣ ಹೆಚ್ಚಬೇಕು. ಬೆಂಗಳೂರಿನಲ್ಲಿ ಶೇಕಡ 50 ಕ್ಕಿಂತ ಕಡಿಮೆ ಮತದಾನ ನಡೆದಿದ್ದು ಆ ರೀತಿ ನಮ್ಮ ಶಿವಮೊಗ್ಗದಲ್ಲಿ ಆಗಬಾರದು. ಮತ ಚಲಾಯಿಸುವ ಮುಖಾಂತರ ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇಕಡ 76 ರಷ್ಟು ಮತದಾನ ನಡೆಡಿದ್ದು, ನಗರ ಪ್ರದೇಶದಲ್ಲಿ ಶೇಕಡಾ 60 ರಷ್ಟು ಮಾತ್ರ ಮತದಾನ ನಡೆದಿದೆ. ನಗರ ಪ್ರದೇಶದ ಜನರು ಮತದಾನ ಮಾಡುವಲ್ಲಿ ಆಸಕ್ತಿ ಕಡಿಮೆ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನ ರೂಪಿಸುವುದಕ್ಕೆ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕರ್ತವ್ಯವಾಗಿದ್ದು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿ ಮೇ 7 ಕ್ಕೆ ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದು. ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತ ಹಾಕುವ ಅವಕಾಶ ಈ ಬಾರಿ ನೀಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ತಮ್ಮ ಮೊಬೈಲ್‍ನಲ್ಲಿ ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ದೂರು ಸಲ್ಲಿಸಬಹುದು ಮತ್ತು 1950 ಗೆ ಕರೆ ಮಾಡಿ ಸಹ ದೂರು ನೀಡಬಹುದು ಎಂದರು.

ಸ್ವೀಪ್ ಐಕಾನ್ ನಿವೇದನ್ ನೆಂಪೆ ಮಾತನಾಡಿ, ಶಿವಮೊಗ್ಗದ ಜನರು ಪ್ರಜ್ಞಾವಂತರೆಂದು ತೋರಿಸಿಕೊಳ್ಳಲು ಒಳ್ಳೆಯ ಅವಕಾಶ ದೊರಕಿದೆ. ಬುದ್ಧಿವಂತರು ಮತದಾನ ಮಾಡುವ ಮೂಲಕ ಪ್ರಜ್ಞಾವಂತರಾಗುತ್ತಾರೆ ಎಂದ ಅವರು ಮೇ 7ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕೋರಿದರು.

ಕಲಾವಿದರಾದ ಸತೀಶ ಪುರಪ್ಪೆಮನೆ ಹಾಗೂ ತಂಡದವರು ಚುನಾವಣಾ ಮಾಡೆಲ್ ನ್ನು ಸಿದ್ದಪಡಿಸಿದ್ದು ಸಿಟಿ ಸೆಂಟರ್ ಮಾಲ್‍ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಅಧಿಕಾರಿ ಸುಪ್ರಿಯ, ಸಿಟಿ ಸೆಂಟರ್ ಮಾಲ್ ನ ದರ್ಶನ್, ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು.

Admin

Leave a Reply

Your email address will not be published. Required fields are marked *

error: Content is protected !!