ಬಿಜೆಪಿ ಹಿಂದೂ- ಮುಸ್ಲಿಂರ ನಡುವೆ ವಿಷ ಬೀಜ ಬಿತ್ತುತ್ತಿದೆ’: ದುನಿಯಾ ವಿಜಯ್
ಶಿಕಾರಿಪುರ: ಬಿಜೆಪಿಯವರು ಹಿಂದೂ- ಮುಸ್ಲಿಂರ ನಡುವೆ ವಿಷ ಬೀಜ ಬಿತ್ತಿ ಸಮಾಜದಲ್ಲಿ ಬಿರುಕು ಮೂಡಿಸಲಾಗುತ್ತಿದೆ. ಆದ್ದರಿಂದ, ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಬೇಡಿ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ನಟ ದುನಿಯಾ ವಿಜಯ್ ಹೇಳಿದರು.
ಶಿಕಾರಿಪುರ ತಾಲ್ಲೂಕಿನ ಹಿತ್ತಲ, ಈಸೂರು, ಸಾಲೂರು, ಮುಡುಬಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ಪ್ರಚಾರ ನಡೆಸಿ ಮಾತನಾಡಿದರು.
ಶತ್ರುವಿನ ಕೊನೆಯ ಅಸ್ತ್ರ ಅಪಪ್ರಚಾರ. ಬಿಜೆಪಿಯವರು ಹಿಂದೂ ಮುಸ್ಲಿಂರ ನಡುವೆ ತಂದಿಡುತ್ತಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರೂ ಕೂಡ ಶಕ್ತಿ ತುಂಬಿದ್ದಾರೆ. ಆದರೆ, ಬಿಜೆಪಿ ಪಕ್ಷದವರು ಮುಸ್ಲಿಂರನ್ನು ಕೆಟ್ಟವರೆಂದು ಬಿಂಬಿಸಲು ಹೊರಟಿದ್ದಾರೆ. ಇದಕ್ಕೆ ಜನರು ಆಸ್ಪದ ಕೊಡಕೂಡದು. ಇಲ್ಲಿನ ಅಭಿವೃದ್ಧಿಗೆ ತಪ್ಪದೆ ಗೀತಾಕ್ಕಗೆ ಮತ ನೀಡಿ ಎಂದು ಕೋರಿದರು.
ಈ ವೇಳೆ ದೇಶದ ಭವಿಷ್ಯದ ಉಳಿವಿಗೆ ಬಿಜೆಪಿ ಪಕ್ಷವನ್ನು ತೊಲಗಿಸಬೇಕಿದೆ. ಆದ್ದರಿಂದ, ಇಲ್ಲಿ, ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ. ಇದಕ್ಕೆ ನ್ಯಾಯ ಒದಗಿಸುವ ಕಾರ್ಯ ಮತದಾರರು ಮಾಡಬೇಕು. ಆದ್ದರಿಂದ, ಇಲ್ಲಿ ಗೀತಕ್ಕ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಜಾತಿ, ಜನಾಂಗಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ. ಈಗಾಗಲೆ ಆ ಕೆಲಸವನ್ನು ನಡೆಸಿಕೊಂಡು ಹೋಗಲಾಗುತ್ತಿದೆ. ಅದೇ ರೀತಿ, ಇದೇ ಮೊದಲ ಬಾರಿ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲಾ ಸದಸ್ಯರು ಚುನಾವಣೆ ಪ್ರಚಾರಕ್ಕೆ ಬೆಂಬಲ ಸೂಚಿಸಿರುವುದು. ಇದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅದೇ ರೀತಿ, ಕ್ಷೇತ್ರದ ರಕ್ಷಣೆಗೆ ಸದಾ ಸಿದ್ದಳಾಗಿ ನಿಮ್ಮ ನಡುವೆ ಧ್ವನಿಯಾಗಿ ಇರುತ್ತೇನೆ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರ. ಗೋವಿಂದ್ ಮಾತನಾಡಿ, ಜಿಲ್ಲೆಗೆ ಕನ್ನಡ ಪರ ಹೋರಾಟಗಾರ ಹಾಗೂ ಬಂಗಾರಪ್ಪ ಅವರ ಮೇಲಿನ ಅಭಿಮಾನದಿಂದ ಬಂದಿದ್ದೇನೆ. ದೇಶವನ್ನು ಛಿದ್ರ ಮಾಡಲು ಬಿಜೆಪಿ ಹೊರಟಿದೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಕೂಡದು. ಸುಳ್ಳಿನ ಸರದಾರ ಪ್ರಧಾನಿ ನರೇಂದ್ರ ಮೋದಿಗೆ ಜನರ ಮತದಾನದಿಂದ ಉತ್ತರಿಸಬೇಕು. ಸುಳ್ಳು ಹೇಳುವವರಿಗೆ ದೇಶ ಆಳಲು ಅವಕಾಶ ಕಲ್ಪಿಸಿಕೊಡಬೇಡಿ. ಕ್ಷೇತ್ರದ ರಕ್ಷಣೆಗೆ ಗೀತಾ ಶಿವರಾಜಕುಮಾರ ಬೆಂಬಲಿಸಿ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಮಾತನಾಡಿ, ಬಂಗಾರಪ್ಪ ಅವರ ಕೆಲಸಗಳಿಗೆ ಜೀವ ತುಂಬಲು ಗೀತಾಕ್ಕೆ ಮತ ನೀಡಬೇಕು. ಕ್ಷೇತ್ರದ ರಕ್ಷಣೆಯ ಶಕ್ತಿ ದೇವತೆಯಾಗಿ ಗೀತಕ್ಕ ನಿಲ್ಲಲಿದ್ದಾರೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಬಿಜೆಪಿ ಪಕ್ಷದವರು ಪ್ರಧಾನಿ ಮೋದಿಯ ಮುಖವಾಡ ಧರಿಸಿ ಮತಯಾಚನೆಗೆ ಮುಂದಾಗಿದ್ದಾರೆ. ಆದರೆ, ಇಲ್ಲಿ ಬಡವರ ಬದುಕಿಗೆ ದಾರಿ ದೀಪವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದರ ಸದ್ದಡುಗಿಸಬೇಕು ಎಂದರೆ, ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಸ್.ಪಿ.ನಾಗರಾಜ ಗೌಡ, ಹಾಸ್ಯ ನಟ ಚಿಕ್ಕಣ್ಣ, ನಿರೂಪಕಿ ಅನುಶ್ರೀ, ಭೋವಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಗೋಣಿ ಮಹಲ್ತೇಶ್, ಶಿವರಾಂ ಪಾರಿವಾಳ, ಹಾಸ್ಯನಟ ಜಗ್ಗಣ್ಣ, ನಗರದ ಮಹದೇವಪ್ಪ, ಬಲ್ಕೀಸ್ ಭಾನು,ಪುಷ್ಪ,ಜಯಶ್ರೀ, ಇದ್ದರು.