ಆಸ್ಪತ್ರೆ ರಹಿತ ಜೀವನ: ಗೋ ಕ್ಷೀರವು ಅಮೃತ..!

ಆಸ್ಪತ್ರೆ ರಹಿತ ಜೀವನ: ಗೋ ಕ್ಷೀರವು ಅಮೃತ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಅತ್ರ ಗವ್ಯಂ ತು ಜೀವನೀಯಂ…………..ರಕ್ತಪಿತ್ತಂ ಚ ನಾಶಯೇತ್ |
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23

ಆಯುರ್ವೇದದಲ್ಲಿ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ. ಅದರಲ್ಲಿ ನಿನ್ನೆ 7 ಗುಣಗಳನ್ನು ನೋಡಿದೆವು, ಇಂದು 6 ಮತ್ತು ನಾಳೆ 5 ಗುಣಗಳನ್ನು ನೋಡೋಣ.

8) ಶ್ರಮ ನಾಶ
ಶಾರೀರಿಕ ಆಯಾಸವನ್ನೇ ಶ್ರಮ ಎನ್ನುತ್ತೇವೆ. ನಮ್ಮ ಜೀವಕೋಶಗಳಿಗೆ ಆಹಾರ, ನೀರು ಮತ್ತು ಆಮ್ಲಜನಕದ ಕೊರತೆ ಎದುರಾದಾಗ ಶರೀರ ಆಯಾಸ ಹೊಂದುತ್ತದೆ. ಗೋಕ್ಷೀರವು ಪರಿಪೂರ್ಣ ಆಹಾರವಾಗಿರುವುದರಿಂದಲೂ ಅದು ಆಪ್ ಧಾತು(ಜಲಾಂಶದಿಂದ)ವಿನಿಂದ ಕೂಡಿರುವುದರಿಂದಲೂ, ಶೀತವೀರ್ಯದಿಂದ ತುಂಬಿರುವುದರಿಂದಲೂ ಹಾಗೂ ಪುಪ್ಪುಸಗಳ ಕಾರ್ಯಕ್ಕೆ ಶ್ಲಕ್ಷ್ಣ-ಸ್ನಿಗ್ಧ ಸಹಕಾರ(internal mucolytic action) ನೀಡಿ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯವನ್ನು ವರ್ಧಿಸುತ್ತದೆ. ಅಗ್ನಿಶಕ್ತಿಯನ್ನಾಧರಿಸಿ ಶಾರಿರಿಕ ಶ್ರಮವನ್ನು ಸಂಪೂರ್ಣ ನಿವಾರಿಸುತ್ತದೆ. ವಿಶೇಷ ಎಂದರೆ ಗೋದುಗ್ಧವು ಶರೀರದ ಯಾವ ಧಾತುವನ್ನೂ ಬಿಡದೇ ಎಲ್ಲ ವಿಧದ ಜೀವಕೋಶಗಳನ್ನೂ ತಲುಪುತ್ತದೆ.

ಬದಲಾವಣೆಂದರೆ ದ್ರವರೂಪದ ಹಾಲು ಅನೇಕ ಹಂತಗಳಲ್ಲಿ ಸ್ನಿಗ್ಧವಾದ ತುಪ್ಪವಾಗಬಲ್ಲದು, ಘನರೂಪೀ ಅಸ್ಥಿಯಾಗಬಲ್ಲದು ಆದರೆ ಬೇರಾವ ದ್ರವರೂಪೀ ಆಹಾರಕ್ಕೂ ಕ್ಷೀರದಂತೆ ವಿವಿಧ ಹಂತದ ಪರಿಣಾಮ ಗುಣ ಇಲ್ಲ. ಹಾಗಾಗಿ ಶ್ರಮ ನಿವಾರಣೆಯಲ್ಲಿ ಹಾಲು ಸರ್ವಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತದೆ.

9) ಭ್ರಮ ನಾಶ
ಭ್ರಮ ಎಂದರೆ ತಲೆಸುತ್ತುವಿಕೆ “ರಜೋ ಪಿತ್ತಾನಿಲಭ್ಯಾಂ ಭ್ರಮಃ” ಅಂದರೆ ಪಿತ್ತ ವಾತ ಮತ್ತು ಮನೋ ದೋಷವಾದ ರಜಸ್ಸು ಸೇರಿದರೆ ತಲೆಸುತ್ತು ಉಂಟಾಗುತ್ತದೆ. ಹಾಗಾಗಿಯೇ ನಿದ್ದೆಹೋದ ಮನುಷ್ಯನಿಗೆ ತಲೆಸುತ್ತುವ ಅನುಭವ ಇರುವುದಿಲ್ಲ.

ಗೋಕ್ಷೀರ ಸೇವನೆಯಿಂದ ಕೇವಲ ಶರೀರ ಮಾತ್ರವಲ್ಲ ಮನೋದೋಷವಾದ ರಜಸ್ಸು ಸತ್ವಗುಣವಾಗಿ ಬದಲಾಗುತ್ತದೆ. ಧಗಧಗಿಸಿ ಉರಿವ ಅಗ್ನಿ, ಭೋರ್ಗರೆವ ನೀರು ಶಕ್ತಿಯಾಗಿ ಮನೆಮನೆಗಳಲ್ಲಿ ಬೆಳಕು ಕೊಡುವಂತೆ, ಮನದ ರಜಸ್ಸಿನೊಡಗೂಡಿ ಭ್ರಮ ಉಂಟುಮಾಡುತ್ತಿರುವ ವಾತಪಿತ್ತಗಳು ಶಕ್ತಿ ಉತ್ಪತ್ತಿ ಮಾಡುತ್ತವೆ. ಇಲ್ಲಿ ರಜೋ ಶಕ್ತಿ ಕ್ಷೀರದಿಂದ ಪರಿವರ್ತನೆಗೊಂಡು ಸತ್ವವಾಗುತ್ತದೆ.

10) ಮದ್ಯಜನ್ಯ ಮದ ನಾಶ
ಮನಸ್ಸು ಊರ್ಧ್ವಮುಖ ಗತಿ ಪಡೆದು ಅದರ ಶಕ್ತಿ ಪ್ರಕಟವಾಗುವ ಉನ್ಮತ್ತಸ್ಥಿತಿಗೆ “ಮದ” ಎನ್ನುತ್ತೇವೆ.

ಆಗ ಮನಸ್ಸು ಶುಚಿ-ಅಶುಚಿಯಲ್ಲಿ, ಧರ್ಮ-ಅಧರ್ಮಗಳಲ್ಲಿ, ತನ್ನ-ಅನ್ಯದಲ್ಲಿ ಭೇದವನ್ನು ಮರೆತು ಲೌಕಿಕ ವ್ಯಾಪಾರಕ್ಕೆ ಧಕ್ಕೆ ತರುತ್ತದೆ. ಈ ಮದಕ್ಕೆ ಎರೆಡು ಕಾರಣ- ಪರಿಪೂರ್ಣ ಜ್ಞಾನವಾದ ಸತ್ವ ಮತ್ತು ಅತ್ಯಂತ ಅಜ್ಞಾನವಾದ ತಮಸ್ಸು. ಮದ್ಯಸೇವನೆಯಲ್ಲಿ ತಮಸ್ಸಿನ ಪ್ರಭಾವದಿಂದಾಗಿ ಏಕತ್ರಭಾವನೆ ಬಂದರೆ, ಜ್ಞಾನಿಗೆ ಸತ್ವದ ಕಾರಣ ಏಕತ್ರಭಾವ ಬರುತ್ತದೆ. ಗೋಕ್ಷೀರ ಸೇವನೆಯು ಸತ್ವಗುಣವರ್ಧಕವಾಗಿರುವುದರಿಂದ ಮದ್ಯದಿಂದ ಉಂಟಾಗುವ ತಮೋರೂಪಿ ಮದವನ್ನು ನಾಶಮಾಡುತ್ತದೆ.

ಮದ್ಯಸೇವನೆಯ ಚಟ ಅಂಟಿಸಿಕೊಂಡವರಿಗೆ ನಿತ್ಯವೂ ಗೋಕ್ಷೀರ ಸೇವನೆ ಮಾಡಿಸಿದರೆ, ಅವರಿಂದ ಯಾರಿಗೂ ಯಾವುದೇ ಆಪತ್ತೂ ಬಾರದು ಮತ್ತು ಅವರ ಶರೀರವೂ ಹಾಳಾಗದು.

11) ಅಲಕ್ಷ್ಮಿ ನಾಶ
ಅಶುಭವನ್ನೇ ಅಲಕ್ಷ್ಮಿ ಎನ್ನುತ್ತೇವೆ. ಪಿತ್ತದೋಷ ದ್ರವತಃ ವರ್ಧಿಸಿದಾಗ ಅಗ್ನಿಮಾಂದ್ಯವಾಗಿರುತ್ತದೆ.

ಸೂರ್ಯನ ಬೆಳಕು ಪ್ರಖರವಾಗಿರುವ ಮಧ್ಯಾಹ್ನದಲ್ಲಿ ಕತ್ತಲಾದಂತೆ. ಸೂರ್ಯನಲ್ಲಿ ಯಾವಗುಣವೂ ಕತ್ತಲೆಯನ್ನುಂಟು ಮಾಡದು, ಹಾಗೇ ಪಿತ್ತವು ಅಗ್ನಿಯನ್ನು ಮಂದ ಮಾಡದು. ವಿಶೇಷ ಅವಸ್ಥೆಯಲ್ಲಿ ಎರಡೂ ಘಟಿಸುತ್ತವೆ. ಆಗ ಕಾರಣವನ್ನು ಶಮನಮಾಡಲು ಬರುವುದಿಲ್ಲ, ಅಂದರೆ ಸೂರ್ಯನನ್ನು ಬಡಿದೆಬ್ಬಿಸಲು ಬರುವುದಿಲ್ಲ.

ಗೋಕ್ಷೀರದ ಸರಗುಣವೇ ಈ ಪಿತ್ತವನ್ನು ಹೊರಹಾಕಿ ಅಗ್ನಿವರ್ಧನೆ ಮಾಡುತ್ತದೆ. ಎಲ್ಲಿ ಅಗ್ನಿ ಪ್ರಖರವಾಗುತ್ತದೋ ಅಲ್ಲಿ ಶರೀರದ ಕಾಂತಿ ವರ್ಧಿಸುತ್ತದೆ, ಅಲಕ್ಷ್ಮಿ ಎಂಬ ಕಾಂತಿಹೀನ ತ್ವಕ್-ನೇತ್ರ-ಸ್ವರ-ವದನಗಳು ಲಕ್ಷ್ಮೀ ತತ್ವದಿಂದ ಶೋಭಿಸುತ್ತವೆ.

12) ಶ್ವಾಸ ನಾಶ
ಉಸಿರಾಟದ ತೊಂದರೆಯನ್ನೇ ಆಚಾರ್ಯರು ಶ್ವಾಸರೋಗ ಎಂದಿದ್ದಾರೆ. ಐದು ಶ್ವಾಸರೋಗಗಳಲ್ಲಿ ಚಿಕಿತ್ಸಾಯೋಗ್ಯ ಶ್ವಾಸರೋಗ ಎಂದರೆ “ತಮಕಶ್ವಾಸ” (ಬ್ರಾಂಕೈಟೀಸ್-ಅಸ್ತಮಾ) ಮಾತ್ರ. ಉಳಿದ 3 ಶ್ವಾಸರೋಗಗಳು ಅಸಾಧ್ಯ ಮತ್ತು 1 ವಿಧದ ಶ್ವಾಸರೋಗ ಔಷಧರಹಿತ ಗುಣ ಹೊಂದುವುದು.

ಕಫವೇ ಪ್ರಧಾನವಾದ ಈ ತಮಕಶ್ವಾಸ ಅಥವಾ ಅಸ್ತಮಾ ಉಂಟಾಗುವುದು ಮಾತ್ರ ಪಿತ್ತಸ್ಥಾನದಲ್ಲಿ!, ಕಫಸ್ಥಾನದಲ್ಲಿ ಅಲ್ಲ!! ಗೋಕ್ಷೀರಯಿಂದ ನಿತ್ಯವೂ ಬಹಳಷ್ಟು ಬಾರಿ ಭೇದಿಯಾಗುತ್ತದೆ, ಪಿತ್ತ ಹೊರಹೋಗುತ್ತದೆ, ಶ್ವಾಸರೋಗ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಇದನ್ನು ನಿತ್ಯ ವಿರೇಚನ ಎನ್ನುತ್ತಾರೆ.

13) ಕಾಸ ನಾಶ
ಕೆಮ್ಮು ಇದನ್ನು “ಕಾಸ” ಎನ್ನುತ್ತದೆ ಆಯುರ್ವೇದ. ಎಲ್ಲಾ ಪ್ರಕಾರದ ಕೆಮ್ಮಿಗೂ ಕಾರಣ “ಅಧಃ ಪ್ರತಿಹತಃ ವಾಯು” ಅಂದರೆ ಅಪಾನವಾತ ಗುದಸ್ಥಾನದಿಂದ ಮೆಲ್ಮುಖ ಚಲಿಸಿ ವಪೆ(ಡಯಫ್ರಾಮ್)ಯನ್ನು ಮೇಲ್ಮುಖವಾಗಿ ಚಿಮ್ಮಿಸುತ್ತದೆ.

ಆಗ ಉಂಟಾಗುವುದೇ ಕಸ್-ಕಸ್ ಎಂದು ಸದ್ದುಮಾಡುವ ಕಾಸ/ಕೆಮ್ಮು. ಗೋಕ್ಷೀರವು ಅಪಾನ ವಾತವನ್ನು ಅನುಲೋಮನ ಮಾಡುತ್ತದೆ ಅಂದರೆ ಹೊರಹಾಕುತ್ತದೆ, ಆಗ ಕೆಮ್ಮು ಇಲ್ಲವಾಗುತ್ತದೆ.

ಉಳಿದ ಗುಣಗಳನ್ನು ಗುರುಕೃಪೆಯಿಂದ ನಾಳೆ ನೋಡೋಣ.

*ನೆನಪಿರಲಿ: ಹತ್ತು ಇಪ್ಪತ್ತು ಲೀಟರ್ ಹಾಲುಕೊಡುವ ಹೈಬ್ರೀಡ್ ತಳಿಯ ಪ್ರಾಣಿಯ ಹಾಲಿನಲ್ಲಿ ಈ ಯಾವಗುಣಗಳೂ ಇರುವುದಿಲ್ಲ.

ಸ್ವಾಸ್ಥ್ಯಕ್ಕಾಗಿ-ಸ್ವಲ್ಪ ಬದಲಾವಣೆ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ
.



Admin

Leave a Reply

Your email address will not be published. Required fields are marked *

error: Content is protected !!