ಅತಿಯಾಗಿ ಅಡಿಕೆ ತಿಂದರೆ ಹೈಪೋಥೈರಾಯ್ಡಿಸಮ್ ಬರುತ್ತದೆ ಏಕೆ..?
![ಅತಿಯಾಗಿ ಅಡಿಕೆ ತಿಂದರೆ ಹೈಪೋಥೈರಾಯ್ಡಿಸಮ್ ಬರುತ್ತದೆ ಏಕೆ..?](https://shikarinews.com/wp-content/uploads/2022/02/images-1-2.jpeg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಅಡಿಕೆಯ ಗುಣ:
ಕಷಾಯರಸ, ಅಂದರೆ ಒಗರು ರುಚಿಯುಳ್ಳ ಅಡಿಕೆಯು ಒಣಗಿಸುವ ಗುಣವನ್ನು ಹೊಂದಿದೆ. ನಾವು ಅಡಿಕೆ ಜಗಿದಾಗ ಗಂಟಲು ಸಣ್ಣದಾಗುತ್ತದೆ ಮತ್ತು ಕಟ್ಟಿಕೊಳ್ಳುತ್ತದೆ, ಅದಕ್ಕೆ ಕಾರಣವೇ ಅಲ್ಲಿನ ಜೀವಕೋಶಗಳಲ್ಲಿನ ಜಲಾಂಶವನ್ನು ಅಡಿಕೆಯ ರಸ ಹೀರಿಬಿಡುತ್ತದೆ.
ಅಡಿಕೆ ಅನಾರೋಗ್ಯಕರವೇ?
ಇದಕ್ಕೆ ಒಣಗಿಸುವ ಸ್ವಭಾವ ಇದೆ, ಎಲ್ಲಿ ಬಳಸಬೇಕು ಮತ್ತು ಎಷ್ಟು ಪ್ರಮಾಣ ಬಳಸಬೇಕು ಎಂದು ಪ್ರಮಾಣ, ಪರಿಣಾಮಗಳ ಬಗ್ಗೆ ಯೋಚಿಸದೇ ಅಡಿಕೆ ತಿನ್ನುವುದು ಅನಾರೋಗ್ಯಕರ… 🤔
![](https://shikarinews.com/wp-content/uploads/2022/02/images-5-1.jpeg)
ಹಿಂದೆ ತಿನ್ನುತ್ತಿದ್ದರಲ್ಲವೇ? ಎಂದರೆ, ಹಿಂದಿನವರ ಆಹಾರದ ಪ್ರಮಾಣ ಮತ್ತು ಗುಣ ಅಷ್ಟು ಉತ್ತಮವಾಗಿತ್ತು. ಅವರ ಆಹಾರವು ಸ್ನಿಗ್ಧ — ಅಂದರೆ ಜಿಡ್ಡು(ತುಪ್ಪ, ಬೆಣ್ಣೆ) ಮತ್ತು ಕಾರ್ಬೋಹೈಡ್ರೇಟ್ ಪ್ರಧಾನವಾಗಿ ಇರುತ್ತಿತ್ತು. ಆಹಾರ ಸೇವನೆ ನಂತರ ಸೇವಿಸುತ್ತಿದ್ದ ವೀಳ್ಯದೆಲೆ, ಸುಣ್ಣದ ಸಮೇತ ಅಡಿಕೆಯು, ಅಂದರೆ ತಾಂಬೂಲವು ಈ ಜಿಡ್ಡನ್ನೂ, ಕಾರ್ಬೋಹೈಡ್ರೇಟ್ ಗಳನ್ನೂ ಚೆನ್ನಾಗಿ ಜೀರ್ಣಿಸಲು ಕರಗಿಸಲು ಸಹಾಯ ಮಾಡುತ್ತಿತ್ತು…
![](https://shikarinews.com/wp-content/uploads/2022/02/images-4-3.jpeg)
ಈಗ ಏನಾಗಿದೆ?
ಮಧುರ (ಕಾರ್ಬೋಹೈಡ್ರೇಟ್) ರಸ ಮತ್ತು ಜಿಡ್ಡಿನಂಶದ ಅಪ್ರಾಕೃತ ಸೇವನೆ ಅಂದರೆ, ಈಗಲೂ ಜಿಡ್ಡನ್ನು ತಿಂದರೂ ಕರಿದುಕೊಂಡು ಅಥವಾ ಫ್ರೈಡ್ರೈಸ್ ತರಹ ಎಣ್ಣೆಯಲ್ಲಿ ಹುರಿದುಕೊಂಡು ತಿನ್ನುತ್ತಿದ್ದಾರೆ, ಇದರ ಪರಿಣಾಮದಿಂದ ಶರೀರ ದಪ್ಪವಾದರೂ ಜೀವಕೋಶಗಳು ಜಿಡ್ಡಿನ ಅಂಶವಿಲ್ಲದೇ ಒಣಗುತ್ತಿವೆ. ಹಾಗಾಗಿ ಮಾಂಸಖಂಡಗಳ ಚಲನೆಗೆ ಜಿಡ್ಡಿಲ್ಲದೇ ಕಷ್ಟವಾಗಿ ಸ್ವಲ್ಪ ಕೆಲಸ ಮಾಡಿದರೂ ಅತೀವ ಸುಸ್ತು ಬರುತ್ತಿದೆ. ಹಾಗೆಯೇ, ಈ ಜಿಡ್ಡು ಸರಿಯಾದ ಪ್ರಮಾಣದಲ್ಲಿ ಮತ್ತು ಶಕ್ತಿಯುತ ರಕ್ತದ ಕಣಗಳಾಗಿ, ಅಗತ್ಯದಷ್ಟು ಹಾರ್ಮೋನ್ಗಳಾಗಿ ಪರಿವರ್ತನೆಯಾಗುವಷ್ಟು ಶುದ್ಧತೆಯನ್ನು ಉಳಿಸಿಕೊಂಡಿಲ್ಲ!
![](https://shikarinews.com/wp-content/uploads/2022/02/images-3-1.jpeg)
ಸಧ್ಯ ಹೀಗೆ ಜಿಡ್ಡಿದ್ದೂ ಒಣಗಿದ ಶಾರೀರಿಕ ಪರಿಸ್ಥಿತಿ ನಮ್ಮದಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸೇವಿಸುವ ಅಡಿಕೆಯು ಅನಗತ್ಯ ಶೇಖರಣೆಗೊಂಡ ಕೊಬ್ಬನ್ನು ಕರಗಿಸದೇ ಅಲ್ಪ ಸ್ವಲ್ಪ ಇರುವ ಶುದ್ಧವಾದ ಸಾರಮೇದಸ್ಸನ್ನೇ ಒಣಗಿಸಿಬಿಡುತ್ತದೆ. ಆಗ —
• ಶುದ್ಧ ಮೇದಸ್ಸಿನಿಂದ ಉತ್ಪತ್ತಿಯಾಗಬೇಕಾದ ಹಾರ್ಮೋನ್ಗಳ ಕೊರತೆ ಧಾರಾಳವಾಗಿ ಹೆಚ್ಚುತ್ತದೆ ಮತ್ತು
• ಅದಾಗಲೇ ಚಿಕ್ಕದಾಗಿರುವ ಕೆಂಪುರಕ್ತದ ಕಣಗಳು ಇನ್ನಷ್ಟು ನಿರ್ಬಲವಾಗುತ್ತವೆ. ಈ ಎರಡೂ ಕಾರಣದಿಂದ ಥೈರಾಯ್ಡ್ ಗ್ರಂಥಿಯಿಂದ ಬಿಡುಗಡೆಯಾಗುವ ವಿಶಿಷ್ಟ ಹಾರ್ಮೋನ್ಗಳಾದ T3 ಮತ್ತು T4 ಹಾರ್ಮೋನ್ಗಳು ಚಿಕ್ಕ ಚಿಕ್ಕ ರಕ್ತಕಣಗಳನ್ನು ಉತ್ತೇಜಿಸದೇ ಕೈಬಿಡುತ್ತವೆ.
ಈ ಪ್ರಕ್ರಿಯೆಯನ್ನೇ ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತೇವೆ.
![](https://shikarinews.com/wp-content/uploads/2022/02/images-2-2.jpeg)
ಹೀಗೆ ಕೈಬಿಟ್ಟ ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸಲು, ಮೆದುಳಿನಿಂದ ಸ್ರವಿಸುವ TSH ಹೆಚ್ಚುತ್ತಾ ಸಾಗುತ್ತದೆ. ಆಗ ನಮ್ಮ ರಕ್ತದಲ್ಲಿ TSH ಹೆಚ್ಚುತ್ತದೆ.
ಲಕ್ಷಣಗಳೇನು?
ಮೂಳೆಗಳು ಜಿಡ್ಡಿನ ಕೊರತೆಯಿಂದ ಒಣಗುವ ಕಾರಣ, ಅತಿಯಾದ ನೋವು, ಅವು ಈ ಶರೀರದ ಭಾರ ಹೊರಲಾಗದೇ ಮೈಭಾರ, ಆಲಸ್ಯ ಮತ್ತು ಮೂಳೆಯಿಂದ ಉಂಟಾಗುವ ಕೂದಲುಗಳು ಒಡೆಯುವಿಕೆ, ಉದುರುವಿಕೆ, ಹಲ್ಲುಗಳು ಕಳೆಗುಂದಿ ಸೀಳಾಗುವಿಕೆ ಮುಂತಾದವುಗಳು ಉಂಟಾಗುತ್ತವೆ.
![](https://shikarinews.com/wp-content/uploads/2020/08/IMG_20200716_080621_875-2.jpg)
ಚಿಕಿತ್ಸೆ ಏನು?
ಕೇವಲ ಥೈರಾಕ್ಸಿನ್ ಹಾರ್ಮೋನ್ ಪ್ರಯೋಗ ತಾತ್ಕಾಲಿಕ ಮತ್ತು ಜೀವಮಾನ ಪರ್ಯಂತರ ಸೇವಿಸಬೇಕಾದ ಪ್ರಕ್ರಿಯೆ. ಇದರಿಂದ ಮೂಳೆ ಸವೆತವಾಗಲೀ, ದುರ್ಬಲತೆಯಾಗಲೀ ನಿಲ್ಲುವುದಿಲ್ಲ, ಇದೇ ಕಾರಣಕ್ಕೆ ಕ್ಯಾಲ್ಸಿಯಂ ಮಾತ್ರೆಯನ್ನೂ ಜೊತೆಗೆ ಸೇರಿಸುತ್ತಾರೆ, ಆದರೂ ಮೂಳೆ ಸವೆತ ತುಂಬದು. ವಾಸ್ತವದಲ್ಲಿ ಅಶುದ್ಧ ಮೇದಸ್ಸನ್ನು ಕರಗಿಸಿ ಶುದ್ಧ ಮೇದಸ್ಸನ್ನಾಗಿ ಪರಿವರ್ತಿಸುವ ಆಯುರ್ವೇದೋಕ್ತ ಆಹಾರ, ಜೀವನಶೈಲಿ ಮತ್ತು ಕೆಲ ಸಮಯಗಳವರೆಗಿನ ಔಷಧಿಗಳು ಸೂಕ್ತ. ಇಲ್ಲಿ ಜೀವನಪರ್ಯಂತ ಔಷಧಿ ಯೋಜನೆ ಮಾಡುವುದು ಸರಿಯಲ್ಲ…
📞 8792290274
9148702645
ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, Shimoga | Davanagere | Bengaluru | Kangra(H.P)