ಆರೋಗ್ಯಕರ ಗೋಧಿ ಖಾದ್ಯಗಳು: ಭಾಗ-2. ಸಿದ್ಧಗೋಧಿಯ ಅನ್ನ..!
![ಆರೋಗ್ಯಕರ ಗೋಧಿ ಖಾದ್ಯಗಳು: ಭಾಗ-2. ಸಿದ್ಧಗೋಧಿಯ ಅನ್ನ..!](https://shikarinews.com/wp-content/uploads/2021/07/images-2.jpeg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✒️ ಇಂದಿನ ವಿಷಯ:
ಆರೋಗ್ಯಕರ ಗೋಧಿ ಖಾದ್ಯಗಳು:
ಭಾಗ-2. ಸಿದ್ಧಗೋಧಿಯ ಅನ್ನ
ಗೋಧಿಗೆ ಶುದ್ಧಿ ಮತ್ತು ಸಿದ್ಧಿ ಎಂಬ ಎರಡು ಸಂಸ್ಕಾರಗಳು ಇವೆ. ಈ ರೀತಿ ಸಂಸ್ಕರಿಸುವುದು ಹೇಗೆಂದು ಪ್ರತ್ಯೇಕ ಸಂದೇಶದಲ್ಲಿ ತಿಳಿಸಲಾಗಿದೆ.
ಸಿದ್ಧಗೋಧಿಯ ಅನ್ನ:
ಗೋಧಿ ಅನ್ನ ತಯಾರಿಸುವ ಮುನ್ನ, ಸಿದ್ಧಗೋಧಿಯನ್ನು 6-7 ತಾಸುಗಳ ಕಾಲ ನೀರಿನಲ್ಲಿ ನೆನೆಸಿ ಇಡಿ.
ನಂತರ – ಒಂದು ಪ್ರಮಾಣದ ಸಿದ್ಧಗೋಧಿಗೆ ಆರು ಪ್ರಮಾಣದ ನೀರನ್ನು ಹಾಕಿ ಬೇಯಿಸಲು ಇಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿರಿ.
ನಂತರ – ಅದು ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿರಿ, ಅಷ್ಟೂ ನೀರನ್ನು ಗೋಧಿ ಹೀರಿಕೊಳ್ಳುತ್ತದೆ. ಅತ್ಯಲ್ಪ ಪ್ರಮಾಣದ ನೀರು ಉಳಿದಲ್ಲಿ ಅದನ್ನು ಬಸಿದು ತೆಗೆಯಬಹುದು. ಈಗ ಸಿದ್ಧಗೋಧಿಯ ಅನ್ನ ತಯಾರು.
![](https://shikarinews.com/wp-content/uploads/2021/07/images-4.jpeg)
ಈ ಅನ್ನಕ್ಕೆ ಜೋಡು:
• ಅತ್ಯುತ್ತಮ ಜೋಡು ಎಂದರೆ, ಶೇಂಗಾ ಹುರಿದು ತಯಾರಿಸುವ ತಂಬೂಳಿ ಅಥವಾ ಆಂಬ್ರ. ಏಕೆಂದರೆ ಗೋಧಿಯ ಶಕ್ತಿ ಹೊರಬರಲು ತುಪ್ಪ, ಎಣ್ಣೆ ಮೊದಲಾದ ಸ್ನೇಹಾಂಶಗಳೂ, ಬೆಲ್ಲದಂತಹ ಸಿಹಿ ಅಂಶವೂ ಅತ್ಯಂತ ಅವಶ್ಯಕ.
ಹಾಗೆಯೇ,
• ಮೊಸರು ಮಿಶ್ರಿತ ಹಸಿ ಆಂಬ್ರ ಸಹ ಬಳಸಬಹುದು.
• ಆಲೂ, ಗೆಣಸು, ಸುವರ್ಣಗಡ್ಡೆ ಇಂತಹ ಪ್ರೋಟೀನ್ ಪ್ರಧಾನ ತರಕಾರಿಗಳನ್ನು ಬಿಟ್ಟು, ಇನ್ನುಳಿದ ವಿಧವಿಧದ ತರಕಾರಿಗಳನ್ನು ಬಳಸಿ ಸಾಂಬಾರು ತಯಾರಿಸಬಹುದು.
ತುಪ್ಪದ ಬಳಕೆ ಅತ್ಯಂತ ಮುಖ್ಯ:
ಗೋಧಿಯಲ್ಲಿರುವ ಕೆಲವು ಶಕ್ತಿವರ್ಧಕ ಮತ್ತು ಔಷಧೀಯ ಗುಣಗಳು ಜಿಡ್ಡಿನಲ್ಲಿ ಮಾತ್ರ ಕರಗುತ್ತವೆ. ಅವುಗಳನ್ನು ಸಂಪೂರ್ಣ ಉಪಯೋಗ ಮಾಡಿಕೊಳ್ಳಲು, ಶೇಂಗಾ ತಂಬುಳಿಯಂತೆ ತುಪ್ಪವೂ ಅತ್ಯಂತ ಸಹಕಾರಿಯಾಗಿದೆ.
ನಿಮ್ಮ ಗಮನಕ್ಕೆ:
ಮನೆಯಲ್ಲಿಯೇ ಬೆಣ್ಣೆ ತೆಗೆದು ತಯಾರಿಸಿದರೆ ಅದನ್ನು ತುಪ್ಪ ಎನ್ನಬೇಕು. ಅಂಗಡಿಗಳಲ್ಲಿ ಸಿಗುವ ಸಿದ್ಧ ತುಪ್ಪ ಅದು ತುಪ್ಪವೇ ಅಲ್ಲ.
![](https://shikarinews.com/wp-content/uploads/2021/07/images-5.jpeg)
ಸಂಪೂರ್ಣ ಫಲಪ್ರದವಾಗಿಸಲು ಬೇಕಾದ ಅವಶ್ಯಕ ಮುನ್ನೆಚ್ಚರಿಕೆಗಳು:
1) ನಿತ್ಯ ಬಳಕೆ ಸಲ್ಲದು:
ಇದು ಮಾಂಸಾಹಾರದಂತೆಯೇ ಅತ್ಯಂತ ಶಕ್ತಿಯನ್ನು ಹೊಂದಿರುವ ಆಹಾರವಾದ್ದರಿಂದ ಶ್ರಮಿಕರು ವಾರಕ್ಕೆ 3-4 ಬಾರಿ ಬಳಸಬಹುದು, ಅದೇ ಅಲ್ಪಶ್ರಮಿಕರು ವಾರಕ್ಕೆ ಒಂದು ಬಾರಿ ಬಳಸಿದರೆ ಸಾಕು.
2) ಗೊಧಿ ಅನ್ನಕ್ಕೆ ಬೇಳೆ ಸಾರು ನಿಷಿದ್ಧ:
ಅಕ್ಕಿಯ ಅನ್ನದಂತೆ ಇಲ್ಲಿ ಬೇಳೆ ಸಾಂಬಾರು, ತಿಳಿ ಸಾಂಬಾರು ನಡೆಯದು. ಏಕೆಂದರೆ ಅಕ್ಕಿ ಕೇವಲ ‘ಮಧುರ’ ರಸವನ್ನು ಹೊಂದಿದೆ, ಅದೇ ಗೋಧಿ ಅಲ್ಪ ‘ಕಷಾಯ’ ರಸವನ್ನೂ ಸಹ ಹೊಂದಿದೆ. ಇದರಿಂದ ಶರೀರದಲ್ಲಿ ಗ್ಯಾಸ್ ಹೆಚ್ಚುತ್ತದೆ. ನಿರಂತರ ಬಳಸಿದರೆ, ಮಾಂಸಖಂಡಗಳ, ಕೀಲುಗಳ ನೋವುಗಳು, ಕಾಯಿಲೆಗಳು ಬರುತ್ತವೆ.
![](https://shikarinews.com/wp-content/uploads/2021/07/images-1_1626139128414.jpeg)
3) ಕಡಿಮೆ ನೀರಿನಿಂದ ಹಾನಿ:
ಆರು ಪ್ರಮಾಣಕ್ಕಿಂತ ಕಡಿಮೆ ನೀರನ್ನು ಬಳಸಿ ಬೇಯಿಸಿದರೆ, ಉದರ ಸೇರಿದ ನಂತರ ಜೀವಕೋಶಗಳ ಒಳಗಿನ ಜಲವನ್ನು ಹೀರಿಕೊಂಡು ಅವುಗಳ ಆಂತರಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ನಾವು ಗೋಧಿ ಚಪಾತಿ ತಿಂದಾಗ ಶರೀರ ಹೀಟ್ ಎನಿಸುವುದು. ಹಾಗೆಂದು ಹೆಚ್ಚು ನೀರನ್ನು ಕುಡಿದರೆ ಉಪಯೋಗವಾಗುವುದಿಲ್ಲ. ಏಕೆಂದರೆ, ನಾವು ಕುಡಿದ ನೀರು ಮತ್ತು ಜೀವಕೋಶದೊಳಗಿನ ದ್ರವ ಒಂದೇ ಅಲ್ಲ.
ಹೀಗೆ ಸೇವಿಸಿದ ಸಿದ್ಧಗೋಧಿ ಅನ್ನವು –
• ಪೌರುಷ ಬಲವನ್ನು ಹೆಚ್ಚಿಸುತ್ತದೆ.
• ವೀರ್ಯ ವರ್ಧಕ.
• ಬಲಕಾರಕ.
• ಸುಲಭವಾಗಿ ಜೀರ್ಣವಾಗುತ್ತದೆ.
• ಉದರಕ್ಕೆ ಬಲವನ್ನು ಕೊಡುತ್ತದೆ.
• ಧಾತುಗಳನ್ನು, ವಿಶೇಷವಾಗಿ ಮಾಂಸಖಂಡಗಳನ್ನು ಪೋಷಣೆ ಮಾಡುತ್ತದೆ.
ಆದರೆ, ಹೀಗೆ ಆಹಾರ ಸಿದ್ಧಿ ಮಾಡದೇ ಗೋಧಿ ನುಚ್ಚಿನಿಂದ ನೇರವಾಗಿ ತಯಾರಿಸುವ ಗೋಧಿಯ ಅನ್ನವು ಅನಾರೋಗ್ಯ ತರುತ್ತದೆ!
ಹೀಗೆ ಒಂದು ವಸ್ತುವು ತಾನಾಗಿಯೇ ಎಲ್ಲ ಲಾಭವನ್ನೂ ತಂದುಕೊಡುವುದಿಲ್ಲ, ಅದರ ಸೇವನಾ ವಿಧಾನ, ಯಾರು ಯಾರಿಗೆ ಹೇಗೆ ಲಾಭದಾಯಕ ಎಂದು ಸಾಕಷ್ಟು ಮಾನದಂಡಗಳಿರುತ್ತವೆ.
ಅದರ ಹೊರತು ಕೇವಲ ರಾಸಾಯನಿಕಗಳ ಆಧಾರದಲ್ಲಿ ಆಹಾರ ಸೇವಿಸಿದರೆ ಹೇಗೆ ಒಳಿತಾಗಬಲ್ಲದು ಅಲ್ಲವೇ?!
![](https://shikarinews.com/wp-content/uploads/2020/08/IMG_20200716_080621_875-1.jpg)
ಸಂಪರ್ಕಕ್ಕೆ:
9148702645
8792290274
ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ