ಸಂತ್ರಸ್ಥರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ : ಅನಂತಹೆಗಡೆ ಆಶೀಸರ..!
ಶಿವಮೊಗ್ಗ : ಕಳೆದ 10-15ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶರಾವರಿ ಕಣಿವೆ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ರಾಜ್ಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಎಂದರು.
ಅವರು ಇತ್ತೀಚೆಗೆ ಸಾಗರ ತಾಲೂಕು ಭಾರಂಗಿ ಹೋಬಳಿಯ ನಂದೋಡಿ, ಆರೋಡಿ ಮತ್ತು ಅರಳಗೋಡು ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶಗಳಿಗೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಪ್ರದೇಶವು ವಾಸಕ್ಕೆ ಸುರಕ್ಷಿತವಾಗಿಲ್ಲದಿರುವುದರಿಂದ ಪರ್ಯಾಯ ಸ್ಥಳದಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಂತರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಬಿರುಕು ಬಿಟ್ಟಿರುವ ಪ್ರದೇಶಗಳು ಬಲು ಅಪಾಯಕಾರಿಯಾಗಿವೆ. ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವ ಪ್ರದೇಶಗಳು ಯಾವುದೇ ಕ್ಷಣದಲ್ಲಿ ಧರಾತಲಗೊಳ್ಳಬಹುದಾಗಿದೆ.
ಈ ಪ್ರದೇಶದಲ್ಲಿ ಸಾಮಾನ್ಯದಿಂದ ತೀವ್ರ ಸ್ವರೂಪದಲ್ಲಿ ಗುಡ್ಡಗಳು ಕುಸಿಯಬಹುದಾಗಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿರುವುದಾಗಿಯೂ ತಿಳಿಸಿದ ಅವರು, ಇಲ್ಲಿನ ಕುಟುಂಬಗಳು ಸ್ಥಳಾಂತರಗೊಳ್ಳುವುದು ಅನಿವಾರ್ಯವಾಗಿದೆ. ತಪ್ಪಿದಲ್ಲಿ ಸಂಭವಿಸಬಹುದಾದ ಅವಘಡ ನಿಯಂತ್ರಿಸಲಾಗದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ಕುಮಾರ್, ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀನಿವಾಸರೆಡ್ಡಿ, ಭೂವಿಜ್ಞಾನಿ ಮಾರುತಿ, ಪರಿಸರ ತಜ್ಞ ಕೇಶವಕೊರ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ಕುಮಾರ್ ಸೇರಿದಂತೆ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.
News by: Raghu. Shikari-7411515737