ಮಳೆಗಾಲದಲ್ಲಿ ಹೇಗಿರಬೇಕು..?ಮಳೆಗಾಲದ ಮಾತು ಭಾಗ-2
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:- ಮಳೆಗಾಲದ ಮಾತು
ಭಾಗ-2
ಗಮನಿಸಿ ಅನುಸರಿಸಿ ರೋಗಗಳಿಂದ ದೂರ ಇದ್ದು ಬಿಡಿ
ಮಳೆಗಾಲ ಕೇವಲ ಅಗ್ನಿ(ಜೀರ್ಣಶಕ್ತಿ)ಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ.
ಶಕ್ತಿ ಸಂಚಯ
ಶಕ್ತಿ ವಿಘಟನ
ಶಕ್ತಿ ಪರಿವರ್ತನ
ಈ ಮೂರರ ಮೇಲೂ ದುಷ್ಟ ಪರಿಣಾಮ ಬೀರುವ ಕಾರಣ ಆಯುರ್ವೇದದಲ್ಲಿ ತ್ರಿದೋಷಗಳನ್ನೂ(ಮೂರು ಕ್ರಿಯೆಗಳು) ಕೆಡಿಸಿ ರೋಗಗಳನ್ನು ಪೋಷಣೆ ಮಾಡುವ ಕಾಲ ಕರೆಯುತ್ತಾರೆ.
ರಕ್ತದಲ್ಲಿ ಪಿತ್ತವು ಹೆಚ್ಚಾಗಿ ರಕ್ತ ದುಷ್ಟಿಯಾಗುತ್ತದೆ. ರಕ್ತವು ಸರ್ವಸಂಚಾರಿ ಆದ್ದರಿಂದ ಎಲ್ಲಾ ಜೀವಕೋಶಗಳಲ್ಲೂ ದೋಷಗಳನ್ನು ತುಂಬುತ್ತಾ ಸಾಗುತ್ತದೆ.
ಈ ಸಂದರ್ಭದಲ್ಲಿ ಸೋಂಕು ಶರೀರವನ್ನು ಸೇರಿದರೆ, ಚನ್ನಾಗಿ ಬೆಳೆಯುತ್ತದೆ, ರೋಗ ತರುತ್ತದೆ.
ಪರಿಹಾರ ಏನೆಂದರೆ-
ಭಜೇತ್ ಸಾಧಾರಣಂ ಸರ್ವಂ ಊಷ್ಮಣಃ ತೇಜನಂ ಚ ಯತ್ |
-ಅ.ಹೃ.ಸೂತ್ರ ಸ್ಥಾನ
ದೋಷ ಪಾಚನ ಮಾಡುವ ಅಗ್ನಿಯನ್ನು ಹೆಚ್ಚಿಸುವ ಆಹಾರ ವಿಹಾರಗಳೇಇಲ್ಲಿ ಸೂಕ್ತ.
ಅಂದರೆ
1) ಸಾಧಾರಣ ಆಹಾರ ಸೇವನೆ ಮಾಡಿ-
ಅತ್ಯಂತ ಪೌಷ್ಟಿಕ ಆಹಾರ ಸೇವನೆ ಬೇಡ, ಅದೆಲ್ಲಾ ಕೆಟ್ಟು ರೋಗಕ್ಕೆ ಆಹಾರವಾಗುತ್ತದೆ.
2) ಉಷ್ಣ ಆಹಾರ ಸೇವಿಸಿ-
ಬಿಸಿ ಆಹಾರ, ಕಾಳು ಮೆಣಸು, ಕರಿ ಜೀರಿಗೆ, ಚಕ್ಕೆ, ಕೊತ್ತಂಬರಿ ಕಾಳು ಬಳಸಿ ತಯಾರಿಸಿದ ರಸಂ ಅನ್ನು ಯಥೇಚ್ಛವಾಗಿ ಬಳಸಿ
3) ಸುಲಭವಾಗಿ ಜೀರ್ಣವಾಗುವಷ್ಟು ಆಹಾರವನ್ನು ಮಾತ್ರ ಸೇವಿಸಿ. ಅತಿ ಪ್ರಮಾಣ ನಿಶಿದ್ಧ
4) ಹಸಿಯದೇ ತಿನ್ನುವುದು ಬೇಡವೇ ಬೇಡ.
5) ಆಹಾರ ಜೀರ್ಣಿಸಿದ ನಂತರ ಲಘು ಆದರೆ ಒಂದೂ ದಿನ ತಪ್ಪದೇ ವ್ಯಾಯಾಮ ಅಥವಾ ಬೆವರು ಬರುವವರೆಗೆ ಕೆಲಸ ಮಾಡಿ
6) ಕುದಿಸಿ ಆರಿಸಿದ ನೀರನ್ನೇ ಸೇವಿಸಿ
7) ಆಗಾಗ ಗಂಟಲನ್ನು ಉಪ್ಪು ನೀರಿನಿಂದ ತೊಳೆಯಿರಿ
8) ಸ್ವಲ್ಪ ಸಣ್ಣ ಹಿಪ್ಪಲಿ ಚೂರ್ಣವನ್ನು ಜೇನಿಗೆ ಬೆರೆಸಿ 21 ದಿನ ದಿನವೂ ಸೇವಿಸಿ
9) ಕುದಿಸಿ ಪೂರ್ಣ ತಣ್ಣಗಾದ ಒಂದು ಕಪ್ ನೀರಿಗೆ ಕಾಲು ಭಾಗದಷ್ಟು ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯಿರಿ.
10) ಹಳೆಯ ಅಕ್ಕಿಯ ಅನ್ನ ಸೇವಿಸಿ.
11) ಹುರುಳಿ ಕಾಳುಗಳ ಕಟ್ಟು ಸೇವಿಸಿ
12) ತೃಣ ಧಾನ್ಯಗಳಾದ ನವಣೆ, ಹಾರಕ, ಊದಲುಗಳನ್ನು ಸೇವಿಸಿ.
13) ಚನ್ನಾಗಿ ನಿದ್ದೆ ಮಾಡಿ
14) ಅತಿಯಾದ ಲೈಂಗಿಕತೆ ಬೇಡವೇಬೇಡ
ಈ ಎಲ್ಲವೂ ಆಗಷ್ಟ್ ತಿಂಗಳು ಮುಗಿವವರೆಗೆ ಪಾಲಿಸಿ, ನಂತರ ಶರದ್ ಋತುವಿನ ಸಂಧಿಕಾಲ ಆರಂಭವಾಗುತ್ತದೆ. ಆಗಿನ ವಿಧಿ ವಿಧಾನ ಬೇರೆ ಇರುತ್ತವೆ.
ಎಲ್ಲಾ ಋತುಗಳಿಗಿಂತ ಹೆಚ್ಚು ಹಾನಿಮಾಡುವ ಋತುವೇ ಮಳೆಗಾಲ ಹಾಗಾಗಿ ಎಚ್ಚರದಿಂದ ಪಾಲಿಸೋಣ. ಫಲಿತಾಂಶ ನಮ್ಮ ಮುಂದೆಯೇ ಇರುತ್ತದೆ.
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)