ಶಿಕಾರಿಪುರ : ಸಂಗೊಳ್ಳಿ ರಾಯಣ್ಣನ ಪ್ರತಿಮೆ ಚರಂಡಿ, ರಸ್ತೆ ಅತಿಕ್ರಮಿಸಿ ನಿಯಮ ಪಾಲಿಸದೆ ರಾತ್ರೋರಾತ್ರಿ ಕದ್ದುಮುಚ್ಚಿ ನಿರ್ಮಿಸುವುದು ಸರಿಯಲ್ಲ: ಕಬಾಡಿ ರಾಜಣ್ಣ…!
ಶಿಕಾರಿಪುರ: ಯುವಜನರ ಪ್ರೇರಣಾಶಕ್ತಿ ಸಂಗೊಳ್ಳಿ ರಾಯಣ್ಣ. ಆತನ ಪ್ರತಿಮೆ ಚರಂಡಿ, ರಸ್ತೆ ಅತಿಕ್ರಮಿಸಿದ ಪಿಲ್ಲರ್ಮೇಲೆ ರಾತ್ರೋರಾತ್ರಿ ಕದ್ದುಮುಚ್ಚಿ ನಿರ್ಮಿಸುವುದಲ್ಲ ಬದಲಿಗೆ ಪಟ್ಟಣದ ಪ್ರಮುಖ ಸ್ಥಳದಲ್ಲಿ ಸಾವಿರಾರು ಜನರ ಹರ್ಷೋದ್ಗಾರದೊಂದಿಗೆ ನಿರ್ಮಿಸಬೇಕು ಅದಕ್ಕೆ ಕುರುಬ ಸಮಾಜ ಮುಂದಾಗುತ್ತದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ನಿರ್ಮಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿಷಾಧನೀಯ, ನಿರ್ಮಾಣಕ್ಕೆ ಮುಂದಾಗಿದ್ದ ವ್ಯಕ್ತಿಗಳು ಕಾನೂನು ಪಾಲನೆ ಮಾಡದೆ ಅಂತಹ ಘಟನೆ ಆಗಿದೆ ಅದನ್ನು ಮುಂದಿಟ್ಟುಕೊಂಡು ಯುವಜನರ ದಾರಿತಪ್ಪಿಸುವ, ಭಾವನಾತ್ಮಕ ನಿಲುವಿನ ಮೂಲಕ ಕಾನೂನು ಉಲ್ಲಂಘಿಸುವ ಕೆಲಸ ನಮ್ಮ ಸಮಾಜದ ಯುವಕರಿಂದ ಆಗಿದ್ದು ವಿಷಾಧನೀಯ.
ಪ್ರತಿಮೆ ಸ್ಥಳಾಂತರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಕಾರಣ ಎನ್ನುವ ಆರೋಪ ಸರಿಯಲ್ಲ ಅವರು ನಮ್ಮ ಸಮಾಜದ ಹಲವು ಅಭಿವೃದ್ಧಿ ಕೆಲಸಕ್ಕೆ ಕೋಟ್ಯಾಂತರ ರೂ. ಅನುದಾನ ನೀಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಟ್ಟಿದ್ದು, ಕನಕ ಜಯಂತಿ ಆಚರಣೆ, ಕಾಗಿನೆಲೆ ಪ್ರಾಧಿಕಾರ ರಚನೆ, ಬಾಡಾ ಅಭಿವೃದ್ಧಿ ಸೇರಿ ಹಲವು ಯೋಜನೆ ನೀಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಪಟ್ಟಣದ ಪ್ರಮುಖ ಸ್ಥಳದಲ್ಲಿ ಶೀಘ್ರದಲ್ಲೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸುತ್ತೇವೆ ಅದಕ್ಕೆ ಈಗಾಗಲೆ ಮಾತುಕತೆ ನಡೆದಿದ್ದು ಸಮಾಜದಲ್ಲೂ ಚರ್ಚಿಸಿದ್ದೇವೆ.
ಯಾರೆ ಪ್ರತಿಮೆ ನಿರ್ಮಿಸಿದರೂ ರಾಯಣ್ಣ ವ್ಯಕ್ತಿತ್ವಕ್ಕೆ ಮೆರುಗು ನೀಡುವಂತಿರಬೇಕು, ಕಾನೂನು ಪಾಲನೆ ಮೂಲಕ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.
ಮುಖಂಡ ಟಿ.ಎಸ್.ಮೋಹನ್ ಮಾತನಾಡಿ, ರಸ್ತೆಯಲ್ಲಿನ ಧಾರ್ಮಿಕ ಕಟ್ಟಡ, ಪ್ರತಿಮೆ ತೆರವಿಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ ಅದಕ್ಕಾಗಿ ಸೂಕ್ತಜಾಗೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಬೇಕು ಅದಕ್ಕಾಗಿ ಸಮುದಾಯದ ಸಭೆ ಸೇರಿ ಸ್ಥಳ ನಿರ್ಣಯಿಸೋಣ ಅಲ್ಲಿಯವರೆಗೂ ಎಲ್ಲರೂ ಶಾಂತಿಯಿಂದ ವರ್ತಿಸೋಣ ಎಂದರು.
ತಾಲೂಕು ಕುರುಬ ಸಮಾಜದ ಗೌರವಾಧ್ಯಕ್ಷ ನಗರದ ಮಹಾದೇವಪ್ಪ, ಜಿಲ್ಲಾ ಕುರುಬ ಸಮಾಜದ ಕೆ.ಹಾಲಪ್ಪ, ಸಂಗೊಳ್ಳಿ ರಾಯಣ್ಣ ನಿಗಮ ನಿರ್ದೇಶಕ ಜೆ.ಸುಕೇಂದ್ರಪ್ಪ, ಪಾಲಾಕ್ಷಪ್ಪ, ಕರ್ಯದರ್ಶಿ ರಾಜು ಭೋಗಿ, ಪರಶುರಾಮ್, ರಾಘವೇಂದ್ರ ಮಾಜಿ,ಪ್ರಶಾಂತ್ ಜಿನಳ್ಳಿ, ಹನುಮಂತಪ್ಪ, ಎಚ್.ಎಸ್.ರಘು,ಪ್ರವೀಣ್ ಬೆಣ್ಣೆ, ಪ್ರಕಾಶ್, ಮಹಲಿಂಗಪ್ಪ ಮತ್ತಿತರರು ಇದ್ದರು.