ಗೋಧಿ ಸೇವನಾ ವಿಧಾನ..!
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✒️ ಇಂದಿನ ವಿಷಯ:
ಗೋಧಿ ಸೇವನಾ ವಿಧಾನ
ಆಹಾರ ತಜ್ಞರಿಗೆ, ಜೀವ-ವಿಜ್ಞಾನಿಗಳಿಗೆ ಅರ್ಥವಾಗದ ಒಂದು ಅತ್ಯಮೂಲ್ಯ ವಿಷಯ – “ನಮ್ಮ ಶರೀರಕ್ಕೆ ಅದರ ಸ್ಥಿತಿಗತಿಯ ಬಗ್ಗೆ, ಬೇಕು-ಬೇಡಗಳ ಬಗ್ಗೆ ಚೆನ್ನಾಗಿ ಅರ್ಥವಾಗುತ್ತದೆ” ಎಂಬುದು..
ಅಂದರೆ, ಆಹಾರ-ನೀರು ಯಾವಾಗ ಬೇಕು? ಯಾವ ಆಹಾರ-ನೀರು ಬೇಕು? ಎಷ್ಟು ಪ್ರಮಾಣ ಬೇಕು? ಎಂಬ ವಿಚಾರ ಈ ಶರೀರಕ್ಕೆ ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಅರ್ಥವಾಗುತ್ತದೆ.
ಇತ್ತೀಚಿಗಿನ ಈ ಆಹಾರ ತಜ್ಞರುಗಳೆಲ್ಲರನ್ನೂ ಒಂದೆಡೆ ಕೂಡಿಸಿದರೆ, ಇಂತಹ ಆಹಾರ ಮಾತ್ರ ಒಳ್ಳೆಯದೆಂದು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದು ಅಸಾಧ್ಯವೆಂದು ತೋರುತ್ತಿದೆ!
ಆಯುರ್ವೇದ ಮಹರ್ಷಿಗಳು ಈ ಕಗ್ಗಂಟನ್ನು ಬಿಡಿಸಿಟ್ಟಿದ್ದಾರೆ ಮತ್ತು ಆರೋಗ್ಯಕ್ಕಾಗಿ ಆಹಾರ ಸಂಸ್ಕಾರಗಳನ್ನು ಮಾತ್ರ ಹೇಳುತ್ತಾರೆಯೇ ಹೊರತು ಇದು ಶ್ರೇಷ್ಠ, ಇದು ಕನಿಷ್ಠ ಎನ್ನುವ ಮೊದಲ ಮಟ್ಟದಲ್ಲೇ ಕುಳಿತುಕೊಳ್ಳುವುದಿಲ್ಲ.
ಆಯುರ್ವೇದ ಆಚಾರ್ಯರ ನುಡಿಗಳು ಹೀಗಿವೆ:
ಶಾರೀರಿಕ ಮತ್ತು ಮಾನಸಿಕ ಪ್ರಕೃತಿಗೆ ಒಗ್ಗುವ ಮಾನವನ ಪ್ರವೃತ್ತಿಗೆ ಸಹಾಯಕವಾಗುವ ಮತ್ತು ಮಾನವ ಜೀವಿಸುತ್ತಿರುವ ಹೊರಗಿನ ಅಥವಾ ಪ್ರಾಂತೀಯ ವಾತಾವರಣದ ಎದುರು ಸಶಕ್ತವಾಗಿ ನಿಲ್ಲಬಲ್ಲ ಆಹಾರಗಳನ್ನು ಹೇಳುತ್ತಾರೆ.
ದಕ್ಷಿಣ ಭಾರತದವರಿಗೆ, ಉತ್ತರ ಭಾರತದವರಿಗೆ ಅನ್ಯದೇಶದವರಿಗೆ ಬೇರೆ ಬೇರೆ ಆಹಾರಗಳನ್ನು ಹೇಳುತ್ತಾರೆ. ಇಲ್ಲಿ ಪ್ರತಿ ಪ್ರಾಂತ್ಯವಾರು ಸಿಗುವ ಆಹಾರಗಳೇ ಬಹು ಮುಖ್ಯವಾಗುತ್ತವೆ. ವಿಶ್ವದ ಎಲ್ಲಾ ಪ್ರಾಂತ್ಯದ ಬಗ್ಗೆ ಮತ್ತೆ ಮತ್ತೆ ಪುನರಾವರ್ತಿಸಿ ಹೇಳುವ ಬದಲು ವಿಶ್ವದ ಭೂಭಾಗವನ್ನು ಮೂರು ರೀತಿ ವಿಂಗಡಿಸಿ ಅಲ್ಲಿನ ಆಹಾರದ ಗುಣಧರ್ಮಗಳನ್ನು ಹೇಳಿಬಿಡುತ್ತಾರೆ. ಜಾಂಗಲ(ಒಣ ಭೂಮಿ), ಅನೂಪ(ಅರಣ್ಯಭೂಮಿ), ಸಾಧಾರಣ(ಮಧ್ಯಮಭೂಮಿ).
ಆಚಾರ್ಯರು ಮುಂದುವರಿದು ಹೇಳುತ್ತಾರೆ – ಆಹಾರ ತಯಾರಿಸುವ ವಿಧಾನದ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಾರೆ.
ಸಂಸ್ಕಾರ ಅತ್ಯಂತ ಮುಖ್ಯ ಮನುಷ್ಯರೆಲ್ಲ ನೋಡಲು ಒಂದೇ ತೆರನಾಗಿ ಕಂಡರೂ ಅವರ ಸಂಸ್ಕಾರದಂತೆ ಅವರು ಶ್ರೇಷ್ಠ ಎನ್ನಬಹುದು, ಹಾಗೆಯೇ ಪ್ರಾಣಿಗಳೂ, ಗಿಡ-ಮರಗಳೂ ಸಹ ಸಂಸ್ಕಾರದಿಂದ ಗುಣೋತ್ಕರ್ಷವನ್ನು ಪಡೆಯುತ್ತವೆ.
ಹಾಗಾಗಿ,
ಆಹಾರವನ್ನು ಸಂಸ್ಕಾರದಿಂದ ಶ್ರೇಷ್ಠಗೊಳಿಸಿಕೊಂಡು ಸೇವಿಸಿದರೆ, ಶರೀರ ಶ್ರೇಷ್ಠ ಆರೋಗ್ಯವನ್ನು ಗಳಿಸುತ್ತದೆ.
ಅದನ್ನು ಬಿಟ್ಟು
• ಗೋಧಿ ಸರಿಯಲ್ಲ
• ಅಕ್ಕಿ ತಿಂದರೆ ದಪ್ಪ
• ಸಿರಿಧಾನ್ಯಗಳೇ ಜಗತ್ತಿನ ಶ್ರೇಷ್ಠ ಆಹಾರ
• ರಾಗಿ ತಿಂದವ ನಿರೋಗಿ
• ದಾಳಿಂಬೆ ಶ್ರೇಷ್ಠ
• ಕೊಬ್ಬರಿ ಎಣ್ಣೆ ಜಗತ್ತಿನ ಶ್ರೇಷ್ಠ ಎಣ್ಣೆ
ಇವೆಲ್ಲಾ ರಾಸಾಯನಿಕ ಸಂಘಟನೆಗಳ ಆಧಾರದಲ್ಲಿ ಬಿಂಬಿತವಾದ ಮತ್ತು ಮಾನವನ ಉಪಯೋಗದಲ್ಲಿ ಪೂರ್ಣ ಫಲಕಾರಿಗಳಲ್ಲದ ಹೇಳಿಕೆಗಳು.
ಗೋಧಿಯ ಬಗ್ಗೆ:
ಗೋಧಿ ಒಳ್ಳೆಯದಲ್ಲ ಎಂದು ಸಾರಾಸಗಟವಾಗಿ ತಳ್ಳಿಹಾಕುವುದು ಯಾವ ದೃಷ್ಠಿಯಿಂದಲೂ ಸರಿಯಲ್ಲ, ಅದರ ಬದಲು –
ಗೋಧಿಯು ಶಕ್ತಿಯುತವಾದ ಧಾನ್ಯ, ಆದ್ದರಿಂದ ಅದು ಉಷ್ಣ ಗುಣ ಬಿಡುಗಡೆ ಮಾಡುವಂತದ್ದು, ಅದು ಅತ್ಯಂತ ಶೀತ ದೇಶದವರಿಗೆ ಉತ್ತಮ ಆಹಾರವಾಗಿದೆ ಮತ್ತು ಮಾನವನ ಬಳಕೆಗೆ ಅದನ್ನು ಈ ರೀತಿಯಾಗಿ ಸಂಸ್ಕರಿಸಿದರೆ ಈ ಶರೀರವನ್ನು ಆರೋಗ್ಯದಿಂದ ಇಡುತ್ತದೆ, ಈ ರೀತಿ ತಯಾರಿಸಿದರೆ ಅದು ರೋಗ ತರುತ್ತದೆ ಎಂದು ಹೇಳಬೇಕಾಗುತ್ತದೆ, ಇದು ಆಯುರ್ವೇದ ಆಚಾರ್ಯರ ಮತ.
ಯಾರು ಏನು ಹೇಳಿದರೂ ಸಹ, ಪ್ರತಿಯೊಬ್ಬರೂ ತಮ್ಮ ಇಷ್ಟವಾದ ಆಹಾರ ಒಳ್ಳೆಯದೆಂದೇ ತಿನ್ನುತ್ತಾರೆ!!ಅದೇ ನಿಜವಾದ ಸತ್ಯ, ಏಕೆಂದರೆ ನಾವು ಮೊದಲೇ ಹೇಳಿದಂತೆ ಈ ಶರೀರ ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಏನು ಬೇಕೆಂದು ಹೇಳುತ್ತದೆ. ಅದು ಜೀವ-ವಿಜ್ಞಾನಿಗಳಿಗಿಂತ ಜಾಣ!
ಗೋಧಿಯನ್ನು ಬಳಸುವ ವಿಧಾನ ನಾಳೆಗೆ ಮುಂದುವರಿಯುವುದು….
ಸಂಪರ್ಕಕ್ಕೆ:
9148702645
8792290274
ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ.