ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕೆ.ಎಸ್ ಗುರುಮೂರ್ತಿ ನೇಮಕ..!
![ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕೆ.ಎಸ್ ಗುರುಮೂರ್ತಿ ನೇಮಕ..!](https://shikarinews.com/wp-content/uploads/2020/06/24sm3ep.gif)
ಶಿಕಾರಿಪುರ: ಮಲೆನಾಡು ರೈತರ ಹಿತಕಾಯುವಲ್ಲಿ ಹೋರಾಟ ನಡೆಸಿದ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ತಾಲೂಕು ಬಿಜೆಪಿ ಸಂಘಟನಾ ಕಾರ್ಯದರ್ಶಿಯಾದ ಕೆ.ಎಸ್. ಗುರುಮೂರ್ತಿ ಅವರಿಗೆ ಎಂಐಡಿಬಿ ಅಧ್ಯಕ್ಷರಾಗಿ ನೇಮಿಸಿ ಗುರುವಾರ ಸರಕಾರ ಆದೇಶ ಹೊರಡಿಸಿದೆ.
ಜಾತಿ, ಹಣದ ಪ್ರಭಾವ ಹೊಂದಿದವರಿಗೆ ಮಾತ್ರ ರಾಜಕೀಯ ಸ್ಥಾನ ಮಾನ ಎನ್ನುವ ಈ ದಿನಗಳಲ್ಲಿ ಬಿಜೆಪಿ ಅಚ್ಚರಿಯ ಆಯ್ಕೆ ಮೂಲಕ ಪಕ್ಷಕ್ಕಾಗಿ ದುಡಿದ ಪ್ರಮಾಣಿಕ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಇದೀಗ ಎಂಐಡಿಬಿ ಅಧ್ಯಕ್ಷ ಸ್ಥಾನಕ್ಕೂ ಗುರುಮೂರ್ತಿ ಅವರ ಅಚ್ಚರಿಯ ಆಯ್ಕೆ ಮಾಡಿದ್ದು ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
![](https://shikarinews.com/wp-content/uploads/2020/06/DSC_0035-1.jpg)
ಬಾಲ್ಯದಲ್ಲಿಯೇ ಆರ್.ಎಸ್.ಎಸ್.ನ ಸ್ವಯಂ ಸೇವಕರಾಗಿದ್ದ ಇವರು 1979-93ರವರೆಗೆ ಸಾಗರದಲ್ಲಿ ಆರ್.ಎಸ್.ಎಸ್. ಪ್ರೇರಿತ ಸೇವಾ ಸಂಸ್ಥೆ ಸೇವಾಸಾಗರದಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ, ಸಾಗರ ತಾಲೂಕು ಗೋಮಾಳ, ಸೊಪ್ಪಿನಬೆಟ್ಟ ಅವೈಜ್ಞಾನಿಕವಾಗಿ ಅರಣ್ಯ ಇಲಾಖೆ ಸಿ ಅಂಡ್ ಡಿ ಭೂಮಿಯಾಗಿ ಪರಿವರ್ತಿಸುವುದರ ವಿರುದ್ಧ ಅಧ್ಯಯನ ನಡೆಸಿ, ನಿರಂತರ ಹೋರಾಟದ ಮೂಲಕ ಅದನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
![](https://shikarinews.com/wp-content/uploads/2020/06/WhatsApp-Image-2020-06-18-at-8.21.42-PM.jpeg)
1993ರಲ್ಲಿ ಆರ್ಎಸ್ಎಸ್ ಹಿರಿಯ ಕಾರ್ಯಕರ್ತರ ಹಿರಿಯೂರು ಕೃಷ್ಣಮೂರ್ತಿ ಅವರ ಅಪೇಕ್ಷೆಯಂತೆ ಶಿಕಾರಿಪುರ ತಾಲ್ಲೂಕಿನ ಬಿ.ಜೆ.ಪಿ.ಯ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡು ಶಿಕಾರಿಪುರ ತಾಲ್ಲೂಕಿನಲ್ಲಿ ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸಿರುವುದಲ್ಲದೇ, ಶಿಕಾರಿಪುರ ತಾಲ್ಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. 2016-19ರವರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ ಇವರು ಬಿಎಸ್ವೈ ಖಾಸಗಿ ಆಪ್ತಸಹಾಯಕರಾಗಿ ಶಿಕಾರಿಪುರದ ಗೃಹ ಕಛೇರಿಗೆ ಸಮಸ್ಯೆ ಹೊತ್ತು ಬರುವ ಜನರ ಆಶಾಕಿರಣವಾಗಿ ಕೆಲಸ ಮಾಡುತ್ತಿದ್ದಾರೆ.
ಎಂಐಡಿಬಿ ಅಧ್ಯಕ್ಷ ಸ್ಥಾನ ನೀಡುವುದು ಸಂತೋಷವಾಗಿದೆ, ಪಕ್ಷ ನೀಡಿರುವ ಹುದ್ದೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ, ಈ ಸಂದರ್ಭದಲ್ಲಿ ಸಂಘ ಪರಿವಾರದ ಎಲ್ಲ ಹಿರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಈ ಜವಾಬ್ದಾರಿ ನೀಡಿರುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯ ಎಲ್ಲ ಶಾಸಕರಿಗೆ, ಪಕ್ಷದ ಎಲ್ಲ ಹಿರಿಯರಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ಶಿಕಾರಿನ್ಯೂಸ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.