ಬಾಲರಾಮನ ಹಣೆಯನ್ನು ಚುಂಬಿಸಿದ ಸೂರ್ಯರಶ್ಮಿ, ಅಯೋಧ್ಯೆಯಲ್ಲಿ ಮೊಳಗಿದ ಶಂಖನಾದ..!
![ಬಾಲರಾಮನ ಹಣೆಯನ್ನು ಚುಂಬಿಸಿದ ಸೂರ್ಯರಶ್ಮಿ, ಅಯೋಧ್ಯೆಯಲ್ಲಿ ಮೊಳಗಿದ ಶಂಖನಾದ..!](https://shikarinews.com/wp-content/uploads/2024/04/IMG-20240417-WA0007.jpg)
ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲು ರಾಮನವಮಿ ಆಚರಿಸಲಾಗುತ್ತಿದೆ. ಎಲ್ಲ ಭಕ್ತರು ಇಂದು ರಾಮನ ಭಕ್ತಿಯ ಭಾವದಲ್ಲಿ ಮುಳುಗಿದ್ದಾರೆ. ರಾಮಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.
ದೇವಾಲಯಗಳಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗುತ್ತಿವೆ. ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇದರ ನಡುವೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹಕ್ಕೂ ವಿಶೇಷ ಪೂಜೆ ಸಲ್ಲಿಸಲಾಗಿದೆ.
![](https://shikarinews.com/wp-content/uploads/2024/04/images-6-2.jpeg)
ಶ್ರೀರಾಮ ನವಮಿಯ ದಿನದಂದೇ ಅಯೋಧ್ಯೆಯಲ್ಲಿ ಪವಾಡವೊಂದು ನಡೆದಿದೆ. ಬಾಲರಾಮನ 51 ಇಂಚು ಎತ್ತರದ ಪ್ರತಿಮೆಗೆ ಸೂರ್ಯನ ಕಿರಣಗಳು ತಾಗಿವೆ. ಸೂರ್ಯನ ಕಿರಣಗಳು ನೇರವಾಗಿ ಬಾಲರಾಮನ ಹಣೆಯ ಮೇಲೆ ಬಿದ್ದವು.
ಸುಮಾರು 6 ನಿಮಿಷಗಳ ಕಾಲ ಸೂರ್ಯನು ಬಾಲರಾಮನ ಹಣೆಗೆ ಮುತ್ತಿಟ್ಟನು. ಇದರ ಪ್ರತಿಬಿಂಬದಿಂದಾಗಿ ಬಾಲರಾಮನ ವಿಗ್ರಹ ನೀಲಿ ಬಣ್ಣಕ್ಕೆ ತಿರುಗಿತು ಮತ್ತು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿತು. ಇದನ್ನು ಕಣ್ಣಾರೆ ಕಂಡ ಭಕ್ತರು ಮತ್ತಷ್ಟು ಭಕ್ತಿಭಾವ ಮೆರೆದಿದ್ದಾರೆ.
ಶ್ರೀರಾಮ ನವಮಿಯ ದಿನದಂದು ಮಾತ್ರ ಈ ದೃಶ್ಯ ಕಾಣಸಿಗುತ್ತದೆ. ಇದನ್ನು ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕ ಎನ್ನುತ್ತಾರೆ. ಸೂರ್ಯನ ಕಿರಣಗಳು ರಾಮಲಲ್ಲಾ ಅವರ ಹಣೆಗೆ ತಾಗುವಂತೆ ಆಧುನಿಕ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ.