“ಆಸ್ಪತ್ರೆಗಳಿಂದ ದೂರ ಇರುವುದು ಎಲ್ಲರ ಜವಾಬ್ದಾರಿ”

“ಆಸ್ಪತ್ರೆಗಳಿಂದ ದೂರ ಇರುವುದು ಎಲ್ಲರ ಜವಾಬ್ದಾರಿ”

ಅತ್ಯಂತ ಸಹಜವಾದ ಸಂಗತಿಗಳನ್ನೇ ಈಗ ಬಹಳ ಕಷ್ಟಪಟ್ಟು ಸಾಧನೆ ಎಂಬಂತೆ ಮಾಡಲಾಗುತ್ತಿದೆ.

ನಮ್ಮ ಬಾಲ್ಯದಲ್ಲಿ, 5ಗಂಟೆಗೇ ಎದ್ದು ದೂರದ ಬಾವಿಯಿಂದ ನೀರು ಸೇದಿ ತಂದು ಹಾಕಿದ ನಂತರ, ಮುಂದಿನ ಓದು, ಕೆಲಸ ಎಲ್ಲಾ ನಡೆಯುತ್ತಿತ್ತು. ಈಗ ಪಾಪ ಮಗು ಮಲಗಲಿ ಎನ್ನುವ ಹಂತಕ್ಕೆ ನಾವೇ ತಂದು ನಿಲ್ಲಿಸಿದ್ದೇವೆ!!
ಒಂದು ದಿನ ಮಗು ಕೆಲಸದಲ್ಲಿ ಸಹಾಯಮಾಡಿದರೆ ಅದೇ ಬಹುದೊಡ್ಡ ಶ್ರಮವಾಗಿದೆ, ಹೊಗಳಿಕೆಗೆ ಕಾರಣವಾಗುತ್ತದೆ.

ಇಷ್ಟು ಶ್ರಮವೂ ಇಲ್ಲದೇ ಮಗು ಊಟಮಾಡುತ್ತಿಲ್ಲ, ಶಕ್ತಿ ಇಲ್ಲ, ಸೋಂಬೇರಿ, ಸರಿಯಾಗಿ ಓದಲ್ಲ….. ಎನ್ನುವುದು ನ್ಯಾಯವೇ.

ಹಿಂದಿನ ಕಾಲಕ್ಕೆ ಹೋಲಿಸಿಕೊಂಡು ಜೀವನ ಮಾಡುವುದು ಬೇಡ, ಬೇರೆ ಮಾಧ್ಯಮದಿಂದಲಾದರೂ ಶಾರೀರಿಕ ಶ್ರಮ ಮಾಡಬೇಡವೇ?
ಈಗ ಯಾರಾದರೂ ದಿನಾಲು ಎರಡು ಮೈಲಿ ನಡೆದು ಬಂದು ಕೆಲಸ ಮಾಡುತ್ತಾರೆ ಎಂದರೆ, ಅವರನ್ನು ಸಾಧಕರಂತೆ ಗೌರವಿಸುತ್ತೇವೆ. ಕಾಲ ಕಳೆದಂತೆ ಸಹಜ ಕೆಲಸಗಳು ಸಾಧನೆ ಎನ್ನುವಂತಾಗುತ್ತಿವೆ. ಈ ಲೆಕ್ಕದಲ್ಲಿ ನಮ್ಮ ತಾತ ಸಾಧನೆಯ ಮೇರುವ್ಯಕ್ತಿ, ಜ್ವರ ಬಂದಾಗಲೂ ಸ್ವಲ್ಪ ಮಟ್ಟಿಗೆ ಕೆಲಸ ಕಡಿಮೆ ಮಾಡುತ್ತಿದ್ದರೇ ಹೊರತೂ ಮಲಗಿದ್ದು ನೆನಪೇ ಇಲ್ಲ, 102ವರ್ಷ ಬಾಳಿದ ಆ ಜೀವ ಸಾಕು ಬದುಕಿದ್ದು ಎಂದು ಊಟ-ನೀರು ಬಿಟ್ಟು ದೇಹತೊರೆದರಲ್ಲ, ಇಂದಿನ ಲೆಕ್ಕದಲ್ಲಿ ಇದೊಂದು ಸಾಧನೆ ಅಲ್ಲವೇ? ಆದರೆ ಆ ಕಾಲದಲ್ಲಿ ಎಲ್ಲರೂ ಹೀಗೇ ಕೆಲಸದಲ್ಲಿ ತೊಡಗಿದ್ದರು.

ವ್ಯಾಯಾಮ ಎಂದರೆ ಕೇವಲ ಸ್ವಂತ ಆರೋಗ್ಯಕ್ಕೆ ಮಾಡಿಕೊಳ್ಳುವ ಶಾರೀರಿಕ ಶ್ರಮವು ಅಲ್ಲವೇ ಅಲ್ಲ.
ಕೇವಲ ಆಸನಗಳು, ವಾಕ್, ಜಿಮ್, ಜಾಗಿಂಗ್ ಮುಂತಾದವು ಸ್ವಾರ್ಥಪ್ರೇರಿತ ಎಂದು ಕಾಣುವುದಿಲ್ಲವೇ? ಇದರಿಂದ ನೇರವಾಗಿ ಕುಟುಂಬಕ್ಕಾಗಲೀ, ಸಮಾಜಕ್ಕಾಗಲೀ ಸ್ವತಃ ನಿಮ್ಮ ಮನಸ್ಸಿಗಾಗಲೀ ಏನಾದರೂ ಲಾಭವಿದೆಯೇ?

ಅದರ ಬದಲು ಮನೆಯಲ್ಲಿರುವ ತಾಯಿ, ಹೆಂಡತಿಗೆ ಸಹಾಯ ಮಾಡಿ, ಬೀದಿಯ ಕಸಗುಡಿಸಿ, ನಿತ್ಯವೂ ಒಂದಷ್ಟು ಅಡುಗೆ ಮಾಡಿ ಅಗತ್ಯ ಇರುವವರಿಗೆ ಹಂಚಿ, ಮೋಟಾರ್ ಬದಲು ಪಂಪನ್ನು ಕಾಲಿನಿಂದ ಪೆಡಲ್ ಮಾಡಿ ನೀರನ್ನು ಮನೆಮೇಲಿನ ಟ್ಯಾಂಕ್‌ಗೆ ಏರಿಸಿ……

ನಿಮಗೆ ವ್ಯಾಯಾಮ ಮತ್ತು ಇತರರಿಗೆ ಸಹಾಯ ಎರಡೂ ಆಗಬಲ್ಲದು. ಇದರಿಂದ ಶಾರೀರಿಕ ಮಾನಸಿಕ ಆರೋಗ್ಯ ನಮ್ಮದಾಗಲಿದೆ.

ಹಿಂದೆ ನಡೆಯುತ್ತಿದ್ದ ಇಂತಹ ಸರಳ ಸಂಗತಿಗಳು ಇಂದು ಸಾಧನೆಯ ಕೊಂಬುಗಳನ್ನು ಪೇರಿಸಿಕೊಂಡಿವೆ

ಬಹಳ ಜನರು “ಆಸ್ಪತ್ರೆ ರಹಿತ ಜೀವನ” ಮಾಲಿಕೆಯನ್ನು ಓದಿ ನಮ್ಮನ್ನು ಹೊಗಳಲು ಪ್ರಾರಂಭಿಸಿದ್ದಾರೆ. ನಮಗೆ ಇದು ಅತ್ಯಂತ ಸಂಕೊಚ ಮುಜುಗರವಾಗುವ ಸಂಗತಿ.
ದಯಮಾಡಿ ಹಾಗೆ ಮಾಡದಿರಿ

ಇದು ನಮ್ಮ ಪಾಲಿನ ಕೇವಲ ಕರ್ತವ್ಯವಲ್ಲ, ಗುರುತರ ಜವಾಬ್ದಾರಿ ಅಲ್ಲವೇ? ಇದನ್ನು ಮಾಡದಿದ್ದರೆ ಅದು ದೋಷವಲ್ಲವೇ?

ಕೆಲವು ಕರ್ತವ್ಯಗಳನ್ನು ಮಾಡಿದರೆ ಪುಣ್ಯ ಲಭಿಸದು. ಮಾಡದಿದ್ದರೆ ಪಾಪ ಬರುವುದು ಖಂಡಿತಾ.
ಉದಾಹರಣೆಗೆ:
ತಂದೆ-ತಾಯಿ ಸೇವೆಯನ್ನು ಮಾಡಿದರೆ ಪುಣ್ಯ ಬರುವುದಿಲ್ಲ, ಬದಲಾಗಿ ಋಣ ಭಾರ ತುಸು ಇಳಿಯುತ್ತದೆ ಅಷ್ಟೆ, ಮಾಡದಿದ್ದರೆ ಪಾಪ ಸುತ್ತಿಕೊಳ್ಳುವುದು ಮಾತ್ರ ಸಿದ್ಧ.

ಹಾಗೆಯೇ, ಗುರು ಕರುಣಿಸಿದ ಈ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಹರಿಸಿದರೆ ಮತ್ತು ಜನರ ಆರೋಗ್ಯ ರಕ್ಷಣೆಗೆ ಬಳಸಿದರೆ ಗುರುವಿನ ಋಣ ತುಸು ಇಳಿಸಿಕೊಂಡಂತೆ ಆಗುತ್ತದೆ, ಜ್ಞಾನ ಹಂಚದಿದ್ದರೆ, ಜನಹಿತಕ್ಕೆ ಬಳಸದಿದ್ದರೆ ಗುರುದ್ರೋಹದ ಮಹಾನ್ ದೋಷ ನಮ್ಮನ್ನು ಸುತ್ತಿಕೊಳ್ಳುತ್ತದೆ. ಅಲ್ಲವೇ?

ಇದೊಂದು ಸಾಧನೆಯೇ? ಕರ್ತವ್ಯವೇ? ಗುರುತರ ಜವಾಬ್ದಾರಿಯೇ? ಯೋಚಿಸಿ.

ಆತ್ಮೀಯರೇ,
ನಿರಂತರ ಕೆಲಸದಲ್ಲಿರಿ, ಅದು ಸ್ವಾರ್ಥವೋ ನಿಃಸ್ವಾರ್ಥವೋ ಅಂತಲೂ ಯೋಚಿಸಬೇಡಿ ಆಗ ಆರೋಗ್ಯ ತಾನಾಗಿಯೇ ಲಭಿಸುತ್ತದೆ.
ಸ್ವಾರ್ಥ ನಿಃಸ್ವಾರ್ಥದ ಲೆಕ್ಕದಲ್ಲಿ ಮುಳುಗಿದರೆ ಇಡೀ ಜೀವನ ಹಾಳಾಗಿ ಹೋಗುತ್ತದೆ.

ನೆನಪಿಡಿ,
ಸದಾ ಚಟುವಟಿಕೆಯಿಂದ ಇರುವುದು ಒಂದು ತಪ್ಪಸ್ಸಲ್ಲ. ಮಾಡಲೇಬೇಕಾದ ಗುರುತರ ಜವಾಬ್ದಾರಿ.

ಎಚ್ಚರಿಕೆ:
ಭಾವೋತ್ಕರ್ಷಕ್ಕೆ ಒಳಗಾಗಿ ಇಂದೇ, ಅತಿ ಹೆಚ್ಚು ಶ್ರಮಾದಾನ ಮಾಡಿ, ಒಂದು ವಾರ ಕಾಯಿಲೆಯಿಂದ ಮಲಗಿ ಮುಂದಿನ ವಾರದಿಂದ ಮೊದಲಿನಂತೆ ಆಗುವ ಬದಲು.
ಇದನ್ನು ಹಂತಹಂತವಾಗಿ ಪಾಲಿಸಿ ಒಂದೊಂದೇ ಹೆಜ್ಜೆ ಇಡುತ್ತಾ ಸಾಗಿದರೆ ಮಹತ್ತಿಗೆ ಹತ್ತರವಾಗುತ್ತೀರಿ.

ಒಳ ಹೊರಗಿನ ಆರೋಗ್ಯಕ್ಕೆ ಇನ್ನೇನು ಬೇಕು?

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere |

Admin

Leave a Reply

Your email address will not be published. Required fields are marked *

error: Content is protected !!