ರಾತ್ರಿ ಆಹಾರ ಸೇವನೆ ವಿಧಾನ ಸರಿಯಾದರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು…!

ರಾತ್ರಿ ಆಹಾರ ಸೇವನೆ ವಿಧಾನ ಸರಿಯಾದರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು…!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ರಾತ್ರಿ ಆಹಾರ ಸೇವನೆ ವಿಧಾನ ಸರಿಯಾದರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು.

📜 ರಾತ್ರೌ ಚ ಕುರ್ಯಾತ್ ಪ್ರಥಮ ಪ್ರಹರಾಂತರೇ |
ಕಿಂಚಿತ್ ಊನಂ ಸಮಶ್ನೀಯಾತ್ ದುರ್ಜರಂ ತತ್ರ ವರ್ಜಯೇತ್ ||

  • ಭಾವಪ್ರಕಾಶ ನಿಘಂಟು

💠 ರಾತ್ರಿ ಆಹಾರದ ಸಮಯ, ಗುಣ ಮತ್ತು ಪ್ರಮಾಣ:
ರಾತ್ರಿ ಆರಂಭದ ಪ್ರಥಮ ಪ್ರಹರದೊಳಗೆ ಅಂದರೆ ಸೂರ್ಯಾಸ್ತದ ಒಂದೂವರೆ ಗಂಟೆಯೊಳಗೆ ಊಟ ಮುಗಿಸಬೇಕು.

ಜೀರ್ಣಕ್ಕೆ ಕಷ್ಟವಾಗುವ ಗುಣ ಇರುವ ಅಂಟುಳ್ಳ ಪದಾರ್ಥಗಳಿಂದ(ಮೈದಾ, ಉದ್ದು, ಗೋಧಿ, ಸಕ್ಕರೆ, ಎಣ್ಣೆ….) ತಯಾರಿಸಿದ ಆಹಾರ ಬಿಟ್ಟು, ಸುಖವಾಗಿ ಜೀರ್ಣಿಸುವ ಲಘು ಆಹಾರಗಳೇ ರಾತ್ರಿ ಭೋಜನಕ್ಕೆ ಶ್ರೇಷ್ಠ.

ರಾತ್ರಿ ಆಹಾರದ ಪ್ರಮಾಣವನ್ನೂ ಸಹ ಕಿಂಚಿತ್ ಊನ(ಕಡಿಮೆ) ಪ್ರಮಾಣದಲ್ಲಿ ಸೇವಿಸಬೇಕು.

💠 ಆಹಾರ ಸೇವನೆಯ ನಂತರ-
📜 ಭುಕ್ತ್ವಾ ರಾಜವತ್ ಆಸೀತ ಯಾವತ್ ಅನ್ನ ಕ್ಲಮೋ ಗತಃ|
ತತಃ ಪಾದಶತಂ ಗತ್ವಾ ವಾಮಪಾರ್ಶ್ವೇ ತು ಸಂವಿಶೇತ್||……
-ಸುಶ್ರುತ ಸಂಹಿತಾ

★ ಊಟ ಮಾಡಿದ ನಂತರ ಬರುವ ಆಯಾಸ(ಕ್ಲಮ) ಕಡಿಮೆಯಾಗುವವರೆಗೆ, ರಾಜನಂತೆ ಆರಾಮವಾಗಿ ಕುಳಿತಿರಬೇಕು. ಮನಸ್ಸಿಗೆ ಪ್ರಿಯವಾದ ಮಾತುಗಳನ್ನಾಡಬೇಕು, ಹಿತಕರವಾದ ನೋಟ ಸ್ಪರ್ಶಾದಿಗಳಿಂದ ಕುಳಿತು, ನಂತರ-
ನೂರು ಹೆಜ್ಜೆಗಳಷ್ಟು ನಡೆದು
ಎಡಗಡೆ ಮಗ್ಗುಲಾಗಿ ಮಲಗಿಬಿಡಬೇಕು.

💠 ನಾವು ಎಷ್ಟು ಜನ ಹೀಗೆ ಮಾಡುತ್ತಿದ್ದೇವೆ?
★ ಬಹುತೇಕ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ ಮತ್ತು ಚಿರಕಾಲ ಇರುವ ರೋಗಗಳಿಗೆ ತುತ್ತಾಗಿದ್ದೇವೆ.

💠 ತಡರಾತ್ರಿ ಊಟ:
★ ರೋಗಕಾರಕ ಸೂಕ್ಷ್ಮಜೀವಿಗಳು(Micro organism) ಕ್ರಿಯಾಶೀಲವಾಗಿರುವ ರಾತ್ರಿ 9-12ರ ನಡುವಿನ ಕಾಲವನ್ನು “ಭೂತವೇಲ ಕಾಲ” ಎನ್ನುತ್ತಾರೆ. ಈ ಸಮಯದ ಭೋಜನದಿಂದ ಶರೀರದಲ್ಲಿ ರೋಗಕಾರಕ ಅಂಶವೇ ಹೆಚ್ಚುತ್ತದೆ.

💠 ಜೀರ್ಣಕ್ಕೆ ಕಷ್ಟವಾಗುವ ಭೂರಿ ಭೋಜನ: ಮತ್ತು ಭಾರೀ ಭೊಜನ:
★ ರಾತ್ರಿ ಚಟುವಟಿಕೆ ಇಲ್ಲದ ಶರೀರಕ್ಕೆ ಭೂರೀ ಭೋಜನವನ್ನೂ(ಜೀರ್ಣಕ್ಕೆ ಸುಲಭವಲ್ಲದೆ ಅಂಟುಳ್ಳ ಆಹಾರ) ಮತ್ತು ಭಾರೀ ಪ್ರಮಾಣದ ಭೋಜನವನ್ನೂ ಮಾಡಿಸಿದರೆ, ಆಮವಿಷ(ರೋಗ ಪೋಷಕ ಅಂಶ) ಹೆಚ್ಚಿ ಧಾತುಗಳನ್ನು ಬಲಹೀನಗೊಳಿಸಿ, ರೋಗಕ್ಕೆ ತಳ್ಳುತ್ತದೆ.

ಆದರೆ ಇಂದಿನ ಜಗದಲ್ಲಿ ರಾತ್ರಿಯೇ ನಿಧಾನವಾಗಿ ಊಟಮಾಡಲು ಸಮಯ ಸಿಗುತ್ತದೆಂಬ ಕಾರಣಕ್ಕೆ ಹೊಟ್ಟೆತುಂಬ ತಿಂದು ರೋಗಕ್ಕೆ ಸಹಕರಿಸಿ ಮಲಗುತ್ತೇವೆ.

💠 ನೆಮ್ಮದಿಯಿಂದ ಕುಳಿತುಕೊಳ್ಳಿ:
★ ರಾತ್ರಿ ಭೋಜನದ ನಂತರ ಮನದಲ್ಲಿ ಯಾವ ಯೋಚನೆಗಳಿಲ್ಲದೇ, ಮಕ್ಕಳ, ಮೊಮ್ಮಕ್ಕಳ ಮಧುರ ಮಾತು, ನೋಟ, ಸ್ಪರ್ಶಗಳಿಂದ ಪರಸ್ಪರರು ಮುದಗೊಳ್ಳಬೇಕು, ಹೀಗೆ ಕ್ಲಮ(ಏನನ್ನಾದರೂ ತಿಂದ ನಂತರ ಬರುವ ಆಯಾಸ) ನಿವಾರಣೆ ಆಗುವವರೆಗೆ ಇದ್ದರೆ- ರಾತ್ರಿ ಚಟುವಟಿಕೆ ಇಲ್ಲದಿದ್ದರೂ ಮನಸ್ಸಿನ ನೆಮ್ಮದಿಯೇ ಆಹಾರವನ್ನು ಜೀರ್ಣ ಮಾಡುತ್ತದೆ. (ಉದಾ: ಶಿಶುಗಳು ರಾತ್ರಿ ಪದೇ ಪದೇ ಹಾಲು ಕುಡಿಯುತ್ತಿದ್ದರೂ, ನೆಮ್ಮದಿಯ ಕಾರಣ ಶಿಶುಗಳಿಗೆ ಅಜೀರ್ಣವಾಗದು.)
ನಂತರ

💠 ಎಡಮಗ್ಗುಲಾಗಿ ಮಲಗಿ:
★ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಜಠರ ಎಡಕ್ಕೆ ಬಾಗಿದ ಚೀಲದಂತೆ ಇದೆ, ಬಲಕ್ಕೆ ತಿರುಗಿ ಮಲಗಿದರೆ ಆಹಾರದ ಒತ್ತಡ ಅಜೀರ್ಣಕ್ಕೆ ಕಾರಣವಾಗುತ್ತದೆ.

ಹಾಗೆಯೇ
ಜೀರ್ಣಗೊಂಡ ಆಹಾರ ರಸ ರಕ್ತದೊಂದಿಗೆ ಬಲಕ್ಕೆ ಇರುವ ಯಕೃತ್ತಿಗೆ ಹೋಗಿ, ನಂತರ ತಳ್ಳುವ ಬಲ(pumping force ಇಲ್ಲದೇ) ಇಲ್ಲದೇ ರಕ್ತವು ಹೃದಯಕ್ಕೆ ಬರಬೇಕು ಇದು ಬಹಳ ಕಷ್ಟಕರ, ಸಾಕಷ್ಟು ಅಜೀರ್ಣಕ್ಕೆ ಮತ್ತು ರಕ್ತದುಷ್ಟಿಗೆ ಈ ಚಿಕ್ಕ ಅಂಶವೇ ಕಾರಣ. ಹಗಲಲ್ಲಿ ಕಾಲಿನ ಚಲನೆಯಿಂದ ನಮ್ಮ ಮೀನುಖಂಡಗಳ ಸ್ನಾಯುಗಳು(calf muscles) ರಕ್ತವನ್ನು ತಳ್ಳುತ್ತಿರುತ್ತವೆ, ಆಗ ರಕ್ತ ಚಲನೆಗೆ ಈ ಕಷ್ಟಬಾರದು.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!