ನಗರದ ವಿವಿಧೆಡೆ ರಸ್ತೆಯಲ್ಲಿ ವಾಹನ ನಿಲಗುಡೆ ನಿಷೇಧ: ಪರ್ಯಾಯ ಸ್ಥಳ ಸೂಚನೆ..!
![ನಗರದ ವಿವಿಧೆಡೆ ರಸ್ತೆಯಲ್ಲಿ ವಾಹನ ನಿಲಗುಡೆ ನಿಷೇಧ: ಪರ್ಯಾಯ ಸ್ಥಳ ಸೂಚನೆ..!](https://shikarinews.com/wp-content/uploads/2020/06/j-k-computer-solutions-durgigudi-shimoga-computer-training-institutes-p5kbm6ne8h.jpg)
ಶಿವಮೊಗ್ಗ : ನಗರದ ಎನ್.ಟಿ.ರಸ್ತೆ ಮೊದಲನೆ ತಿರುವು, ದುರ್ಗಿಗುಡಿ, ಸರ್ಕಾರಿ ಕಚೇರಿ, ವಾಣಿಜ್ಯ ಮಳಿಗೆಗಳು ಇರುವುದರಿಂದ ಅತಿಯಾದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಇವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ನೀಡಿರುತ್ತಾರೆ.
ಎನ್.ಟಿ.ರಸ್ತೆಯ ಮೊದಲನೇ ತಿರುವಿನಲ್ಲಿ ಅಶೋಕ ಹೋಟೆಲ್ ನಿಂದ ಬಲಿಜ ಸೊಸೈಟಿಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದ್ದು, ಬಿ.ಹೆಚ್.ರಸ್ತೆಯ ಮೊದಲನೇ ಕ್ರಾಸ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಎಲ್.ಟಿ.ಕಾಂಪ್ಲೇಕ್ಸ್ನಿಂದ ಪ್ರತಾಪ್ ಆರ್ಕೇಡ್ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದ್ದು, ಪ್ರತಾಪ್ ಆರ್ಕೇಡ್ ಪಕ್ಕದಲ್ಲಿ ಕನ್ಸರ್ವೇನ್ಸಿ ರಸ್ತೆ ಮತ್ತು ಅಪೋಲೋ ಮೆಡಿಕಲ್ ಪಕ್ಕದ ಕನ್ಸರ್ವೇನ್ಸಿ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
ಶಿವಮೊಗ್ಗ ನಗರದ ವಿನೋಬನಗರ 40 ಅಡಿ ರಸ್ತೆ, 2ನೇ ಮುಖ್ಯ ರಸ್ತೆ, 1ನೇ ಹಂತ, 2ನೇ ಬ್ಲಾಕ್ (ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್) ಕಡೆಗೆ ಹೋಗುವ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿರುತ್ತಾರೆ.