ಶಿವಮೊಗ್ಗ: ದೇಶದಲ್ಲಿಯೇ 5 ಯುನಿವರ್ಸಿಟಿ ಹೊಂದಿರುವ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಮಲೆನಾಡಿನಲ್ಲಿ ಕಾರ್ಯ ಆರಂಭ ಅಡ್ಮಿಷನ್ ಓಪನ್..!

ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿಯ 5 ನೇ ಶಾಖೆ ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ಆರಂಭವಾಗಿದೆ ಎಂದು ಅಪರಾಧ ಶಾಸ್ತ್ರ ವಿಭಾಗದ ಸಹಾಯಕ ಅಧ್ಯಾಪಕಿ ಡಾ. ದಿವ್ಯಶ್ರೀ ಹೇಳಿದರು. ಕೇಂದ್ರ ಸರ್ಕಾರ ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯವನ್ನಿಟ್ಟುಕೊಂಡು ಈ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸರಿಗೆ ಶೈಕ್ಷಣಿಕ ಸಂಶೋಧನೆ, ತರಬೇತಿ, ಪರಿಸರ ವ್ಯವಸ್ಥೆಯನ್ನು ಇಲ್ಲಿ ಕಲಿಸಲಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರೇಮದ ಜೊತೆಗೆ ಬೌದ್ಧಿಕವಾಗಿ ಉತ್ತೇಜಿಸುವ ಶಿಸ್ತಿನ ಪರಿಸರ ನೀಡುವ ಭದ್ರತೆಯ ಬಗ್ಗೆ ಬೆಳಕು ಚೆಲ್ಲುವ ಗುಪ್ತಚರ ಇಲಾಖೆಯ ವಿಷಯಗಳನ್ನು ತಿಳಿಸುವ ಆಂತರಿಕ ಭದ್ರತೆಯ ಬಗ್ಗೆ ನಿಲುವು ತಾಳುವ ಮಿಲಿಟರಿ, ಅರೆಮಿಲಿಟರಿ, ರಾಜತಾಂತ್ರಿಕರು, ನಾಗರಿಕ ಸೇವಕರು ಮತ್ತು ನಾಗರಿಕರ ನಡುವಿನ ವಿಚಾರಗಳನ್ನು ಬೋಧಿಸುವ ಅಂಶಗಳನ್ನು ಈ ವಿಶ್ವವಿದ್ಯಾನಿಲಯ ಒಳಗೊಂಡಿದೆ ಎಂದರು.
ಶಿವಮೊಗ್ಗದಲ್ಲಿ ಪ್ರಸಕ್ತ ವರ್ಷದಿಂದ ಸುಮಾರು 7 ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಡಿಪ್ಲಮೋ ಇನ್ ಪೊಲೀಸ್ ಸರ್ವಿಸ್ ಒಂದು ವರ್ಷದ ಕೋರ್ಸ್ ಆಗಿದೆ. ದ್ವಿತೀಯ ಪಿಯುಸಿ ಪಾಸಾದವರು (ಶೇ.50) ಅರ್ಹರಾಗಿರುತ್ತಾರೆ. ಹಾಗೆಯೇ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ (ಆಂಗ್ಲ ಮಾಧ್ಯಮ) ಕೋರ್ಸ್ ನಾಲ್ಕು ವರ್ಷದ್ದಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ. ೫೦ರಷ್ಟು ಅಂಕ ಪಡೆದವರು ಈ ಕೋರ್ಸ್ ಸೇರಲು ಅರ್ಹರಾಗಿರುತ್ತಾರೆ ಎಂದರು.

ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲಮೋ ಇನ್ ಪೊಲೀಸ್ ಸೈನ್ಸ್ ಈ ಕೋರ್ಸ್ ಒಂದು ವರ್ಷದ್ದಾಗಿದ್ದು, ಶೇ.50 ರಷ್ಟು ಅಂಕ ಗಳಿಸಿದ ಪದವೀಧರರು ಅರ್ಹರಾಗಿರುತ್ತಾರೆ. ಉಳಿದಂತೆ ಎರಡು ವಾರದ 300 ಗಂಟೆಗಳ ವಿಶೇಷ ತರಬೇತಿ ಕೋರ್ಸುಗಳು ಕೂಡ ಇರುತ್ತವೆ. ಇವುಗಳಿಗೆ ಯಾವುದೇ ವಯಸ್ಸಿನ ಅಂತರ ಇರುವುದಿಲ್ಲ ಎಂದರು.
ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಿದವರಿಗೆ ಪೊಲೀಸ್ ಮತ್ತು ಇತರೆ ನೇಮಕದಲ್ಲಿ ಪ್ರಾಶಸ್ತವಿರುತ್ತದೆ. ಅಲ್ಲದೆ ಗುಜರಾತ್, ಜಾರ್ಕಂಡ್ ಮತ್ತು ದೆಹಲಿ ರಾಜ್ಯಗಳಲ್ಲಿ ಶೇ15 ರಷ್ಟು ಅಂಕಗಳ ಮೀಸಲಾತಿ ಇರುತ್ತದೆ. ಮತ್ತು ಇಲ್ಲಿ ಶಿಕ್ಷಣ ಪಡೆದವರಿಗೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಇರುತ್ತವೆ. ಭಾರತದಲ್ಲಿ ಐದು ಕಡೆ ಮಾತ್ರ ಈ ವಿಶ್ವವಿದ್ಯಾನಿಲಯವಿದೆ ಎಂದು ಡಾ. ದಿವ್ಯಶ್ರೀ ಅಪರಾಧ ಶಾಸ್ತ್ರ ವಿಭಾಗದ ಸಹಾಯಕ ಅಧ್ಯಾಪಕಿ ತಿಳಿಸಿದರು.
News by: Raghu Shikari-7411515737