ರೋಗ ನಿರೋಧಕ ಶಕ್ತಿ-ರೋಗ ಬಾರದಂತೆ ತಡೆಯಿರಿ…!!

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ?
“ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್ ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ ಸ್ವಶಾಸ್ತ್ರ ಸಿದ್ಧಾಂತಾತ್ “–ಚರಕ ಸಂಹಿತಾ
ಯಾವುದೇ ರೋಗವನ್ನು- ನಿರೋಧಿಸುವ, ವಿರೋಧಿಸುವ, ಗೆಲ್ಲುವ ಶಕ್ತಿಗೆ ಓಜಸ್ಸು ಅಥವಾ ಬಲ ಎನ್ನುತ್ತೇವೆ. ಇದು ರಸಾದಿ ಸಪ್ತಧಾತುಗಳ ತೇಜಸ್ಸು, ಸಾರಭಾಗ, ಅಥವಾ ಸಾರ ಬಲವೇ ಆಗಿದೆ.
ಸಪ್ತ ಧಾತುಗಳಲ್ಲಿ ಪ್ರಕಟವಾಗುವ ಅತ್ಯಂತ ಶ್ರೇಷ್ಠ ಅಂಶ ಎಂದರೆ ಅದರ ತೇಜಸ್ಸು ಅಥವಾ ಪ್ರಭೆ
ಓಸಸ್ವೀ ಪುರುಷರ ಬಾಹ್ಯ ಅಭ್ಯಂತರ ಆರೋಗ್ಯ ಅತ್ಯಂತ ಸ್ಥಿರವಾಗಿಯೂ ಮತ್ತು ಸರ್ವರೋತಿಯಿಂದಲೂ ಆನಂದದಾಯಕವಾಗಿ ಇರುತ್ತದೆ.

ಯಾವುದೇ ವೈರಸ್, ಬ್ಯಾಕ್ಟೀರಿಯಾ ಮುಂತಾದ ಸೋಂಕಿನ ರೋಗಗಳು ಈ ತೇಜಸ್ಸನ್ನು ಅತಿಕ್ರಮಿಸಿ ಒಳಕ್ಕೆ ಬರಲು ಅಸಾಧ್ಯ ಮತ್ತು ಯಾವುದೇ ಮೆಟಬಾಲಿಕ್, ಅಟೋ ಇಮ್ಯೂನ್ ತೊಂದರೆಗಳೂ ಸುಲಭದಲ್ಲಿ ಬರುವುದು ಸಾಧ್ಯವಿಲ್ಲ. (ಸಧ್ಯಕ್ಕೆ ಭಯಪಡಿಸುತ್ತಿರುವ ಕೊರೋನಾ ವೈರಸ್ ಕೂಡಾ ಓಜಸ್ಸಿನಿಂದ ಹೊಸಕಿಹೋಗುತ್ತದೆ.)
ಇಂತಹ ಶ್ರೇಷ್ಠ ಬಲವನ್ನು ಗಳಿಸಿ ಆರೋಗ್ಯದಿಂದ, ಆತ್ಮವಿಶ್ವಾಸದಿಂದ ಇರುವುದೆ ಹೇಗೆ ನೋಡೋಣ-
ಬಲವು ಯಾವ ರೂಪಗಳಿಂದ ಬರುತ್ತದೆ?
• ಸಹಜ
• ಕಾಲಜ ಮತ್ತು
• ಯುಕ್ತಿಕೃತ ಎಂದು ಮೂರು ರೀತಿಯಲ್ಲಿ ಬಲವು ಬರುತ್ತದೆ.
ಸಹಜ ಬಲ= ಶರೀರ+ಮನಸ್ಸು ಗಳಲ್ಲಿ ಇರುವ ಸ್ವಭಾವಿಕ ಬಲ.
ಜನ್ಮತಃ ಸದೃಢ ಶರೀರ ಬರಲು, ತಾಯಿಯ ಆಹಾರ ಪದ್ಧತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗರ್ಭಿಣಿಯಾಗುವ ಮೊದಲು, ಗರ್ಭಧಾರಣೆಯ ನಂತರ ಎದೆ ಹಾಲು ಬಿಡಿಸುವ ತನಕ ತಾನು ಸೇವಿಸುವ ನಿಯಮಿತ ಸ್ವಸ್ಥಪೂರ್ಣ ಆಹಾರ ಮಗುವಿನ ಜನ್ಮಪೂರ್ತಿ ಆರೋಗ್ಯದಿಂದ ಇಡುತ್ತದೆ. ಹಾಗೇ ತಾಯಿಯ ಚಿಂತನೆಯು ಮಗುವಿನ ಮನೋ ದೃಢತೆಗೂ ಕಾರಣವಾಗುತ್ತದೆ.

ತಂದೆಯ ಆತ್ಮವಿಶ್ವಾಸ ಮಗುವಿಗೆ ಅತ್ಯಂತ ಸಹಜವಾಗಿ ಬರುತ್ತದೆ.
ಇದು ಅತ್ಯಂತ ಶ್ರೇಷ್ಠ ಬಲವಾಗಿದೆ, ಯಾವುದರಿಂದಲೂ, ಯಾವಕಾಲದಲ್ಲೂ ಸುಲಭವಾಗಿ ಹಾನಿಯಾಗದ ಸಹಜ ಬಲ ಇದಾಗಿದೆ. ನವ ದಂಪತಿಗಳು ಸ್ವಲ್ಪ ಇತ್ತ ಗಮನಹರಿಸಿದರೆ ಅತ್ಯಂತ ಶ್ರೇಷ್ಠ ಪ್ರಭಾವೀ ವ್ಯಕ್ತಿತ್ವದ ಕುಲೋತ್ತಮ ಶಿಶುವನ್ನು ಪಡೆಯಬಹುದು.
ಕಾಲಜ ಬಲ:= ಋತು (ಕಾಲ) ಮತ್ತು ಶರೀರದ ವಯಸ್ಸನ್ನೂ ಆಶ್ರಯಿಸಿ ಬರುವ ಬಲ
ಹೇಮಂತ ಮತ್ತು ಶಿಶಿರ ಋತುಗಳು- ಪೃಥ್ವಿಗೂ, ಇಲ್ಲಿನ ಜೀವಗಳಿಗೂ ಸಹಜವಾಗಿ ಬಲವನ್ನು ಓಜಸ್ಸನ್ನು, ನೀಡುತ್ತವೆ. ಏಕೆಂದರೆ, ಈ ಕಾಲದಲ್ಲಿ ರಾತ್ರಿ ದೀರ್ಘವಾಗಿರುತ್ತದೆ, ಜೀವಿಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಮತ್ತು ಬೆವರು ಬರದ ಕಾರಣ, ಜೀರ್ಣಶಕ್ತಿ ಅತ್ಯುತ್ತಮವಾಗಿರುತ್ತದೆ. ಸೇವಿಸಿದ ಸರ್ವರೀತಿಯ ಆಹಾರ ಪಚನವಾಗಿ ಧಾತುಗಳಿಗೆ ಬಲವನ್ನು ಕೊಡುತ್ತದೆ.
ಆದರೆ ಇದು ಅವನ ವಯೋ ಅವಲಂಬಿತ. ಈ ಕಾಲಗಳು ವೃದ್ಧನಿಗೂ, ಯುವಕನಿಗೂ ಒಂದೇ ರೀತಿಯ ಬಲವನ್ನು ಕೊಡಲು ಸಾಧ್ಯವಿಲ್ಲ.
ಯುಕ್ತಿಕೃತ ಬಲ:= ನಾವು ಸೇವಿಸುವ ಆಹಾರ ಮತ್ತು ಮಾಡುವ ಕೆಲಸ(ಶಾರೀರಿಕ ಶ್ರಮ)ಕಾರ್ಯಗಳಿಂದ ತಂದುಕೊಳ್ಳುವ ಬಲ.
ಈ ಶರೀರ ಯಾವುದರಿಂದ ಆಗಿದೆ? ಯಾವ ಆಹಾರ ಯೋಗ್ಯ? ಎಂದು ತಿಳಿದು ಋತುಚರ್ಯ ಪಾಲಿಸುವುದೇ ಇದರ ಲಾಭ ಗಳಿಸಲು ಇರುವ ಉಪಾಯ.
ಮತ್ತು
ಯಾವ ಕೆಲಸಗಳು ಶರೀರ ವರ್ಧನೆಗೆ ಬಲಕೊಡುತ್ತವೆ? ಮತ್ತು ಯಾವ ಕೆಲಸಗಳು ಮನಸ್ಸನ್ನು ಸ್ಥಿರವಾಗಿಡುತ್ತವೆ, ಎಂಬ ಜ್ಞಾನವನ್ನೇ ಬೋಧಿಸುವ ಆಯುರ್ವೇ್ “ಜೀವನ ಕಲೆ” ಯನ್ನು ವಿದೇಯದಿಂದ ಅನುಸರಿಸಲು ಆಚಾರ್ಯರು ಹೇಳುತ್ತಾರೆ.
………..ಆಯುರ್ವೇದ ಉಪದೇಶೇಷು ವಿಧೇಯ ಪರಮಾದರಃ ||
-ಅಷ್ಟಾಂಗ ಹೃದಯ
-ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ ದಾವಣಗೆರೆ

–